Thursday, July 9, 2020

🏮💎🏮💎🏮

ಉಂಡು ಹೋದ ಅಮ್ಮ

🏮💎🏮💎🏮



⭕🔔⭕

ಸುಧಾಕರ ಜೈನ್ ಹೊಸಬೆಟ್ಟು ಗುತ್ತು

⭕🔔⭕


ವೇಗವಾಗಿ ಒಂದರ ಹಿಂದೆ ಒಂದು ಆರು ವಾಹನಗಳು ಬರುತ್ತಿತ್ತು. ವಾಹನಗಳು ಬರುತ್ತಿದ್ದ ರಭಸಕ್ಕೆ ರಸ್ತೆಯಪಕ್ಕದಲ್ಲಿ ನಿಂತಿದ್ದ ಖರ್ಜೂರದ ಮರಗಳು ಅಲ್ಲಾಡುವಂತೆ ಕಾಣುವ ಹಾಗೆ ನಡುಗುತ್ತಿದ್ದವು. ಎದುರಿಗೆ ಮತ್ತು ಕೊನೆಗೆ ಇದ್ದದ್ದು ತೆರೆದ ಜೀಪ್. ಆ ಜೀಪಿನಲ್ಲಿ ಅತ್ಯಾಧುನಿಕ ಗನ್‌ಗಳನ್ನು ಜೀಪಿನ ಫ್ರೇಮ್ ರಾಡಿಗೆ ಆಧಾರವಾಗಿ ಇಟ್ಟುಕೊಂಡು ಸುತ್ತಲೂ ಗುರಿ ಇಟ್ಟು ನಿಂತಿರುವ ಉಗ್ರರು.
ವೇಗವಾಗಿ ಬಂದ ವಾಹನಗಳು ದಸಕ್ಕೆಂದು ನಿಂತಾಗ ಕಪ್ಪು ರಸ್ತೆಯ ಮೇಲೂ ಕಪ್ಪಾದ ಗೆರೆಯಂತಹ ಬರೆ ಬಿದ್ದವು.
ಒಂದು ಕ್ಷಣ ಇಡೀ ವಾತಾವರಣದಲ್ಲಿ ಬೂಟಿನ ಸೌಂಡು ಮಾತ್ರ ಕೇಳುವಷ್ಟು ನಿಶಬ್ಧವೊಂದು ಹುಟ್ಟಿಕೊಂಡಿತು.

ಮರುಕ್ಷಣದಲ್ಲಿ ದಡಬಡ ದಡಬಡ ಶಬ್ಧಗಳಿಂದ ಎಲ್ಲಾ ಮನೆಯ ಬಾಗಿಲು ಮುಚ್ಚಿಕೊಂಡವು. ಮತ್ತೆ ಒಂದು ಕ್ಷಣ ಕಠೋರ ಮೌನ.

ಮರುಕ್ಷಣದಲ್ಲಿ ಢಂ ಢಂ  ಢಂ ಢಂ ಎಂಬ ಶಬ್ಧಗಳಿಂದ ಉಗ್ರರ ಗನ್‌ನೊಳಗೆ ಕುಳಿತಿದ್ದ ಬುಲೆಟ್‌ಗಳು ಒಳಗಿನಿಂದ ಚಿಲಕ ಬಿದ್ದಿರುವ ಬಾಗಿಲೊಳಗೆ ನುಗ್ಗಿತು.

ಒಂದಷ್ಟು ಬಾಗಿಲು ತೆರೆದುಕೊಂಡವು. ತೆರೆಯದ ಬಾಗಿಲ ಎದೆಗೆ ಮತ್ತೊಂದಷ್ಟು ಗುಂಡುಗಳು ನುಗ್ಗಿದವು. ಮತ್ತೊಂದಷ್ಟು ಮನೆಯ ಬಾಗಿಲುಗಳು ತೆರೆದುಕೊಂಡವು.

ತೆರೆದ ಬಾಗಿಲ ಮನೆಗೆ ನುಗ್ಗಿದ ಉಗ್ರರು ಒಂದಷ್ಟು ಹುಡುಗರನ್ನು ಎಳೆದುಕೊಂಡು ಬಂದರು. ಒಬ್ಬಾಕೆ ತಾಯಿ ಉಗ್ರನೋರ್ವನ ತೊಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ನೇತಾಡುತ್ತಿದ್ದಳು.
ನನ್ನ ಮಗನನ್ನು ಬಿಟ್ಟುಬಿಡಿ, ಬಿಟ್ಟುಬಿಡಿ. ಬೇಕಾದರೆ ನಾನೇ ಬರುವೆ ಎಂಬು ಬೊಬ್ಬಿಟ್ಟು ಅಳುತ್ತಾ ತೊಡೆಯಲ್ಲೇ ನೇತಾಡುತ್ತಿದ್ದಳು.
ನೇತಾಡುತ್ತಿದ ತೊಡೆಯನ್ನೇ ಎತ್ತಿ ಹೆಜ್ಜೆ ಹಾಕುತ್ತಿದ್ದ ಉಗ್ರನ ವೇಗ ಕಡಿಮೆಯಾಗುತ್ತಿದ್ದನ್ನು ಕಂಡ ಇನ್ನೊಬ್ಬ ಉಗ್ರ ತೊಡೆಯಲ್ಲಿ ನೇತಾಡುತ್ತಿದ್ದ ಹೆಂಗಸಿಗೆ ಒದ್ದ.
ತಾಯಿ ಕೆಳಗೆ ಬಿದ್ದಳು.
ತೆರೆದ ಜೀಪುಗಳ ಮಧ್ಯೆ ನಿಂತಿರುವ ಪೂರ್ತಿ ಮುಚ್ಚಿರುವ ವಾಹನದೊಳಗೆ ಈ ಎಳೆದುಕೊಂಡು ತಂದ ಹುಡುಗರನ್ನು ತುಂಬಿಸಿದರು.

ಎಲ್ಲಾ ವಾಹನಗಳ ಬಾಗಿಲು ಮುಚ್ಚಿದರು.

ಸುಧಾರಿಸಿಕೊಂಡ ತಾಯಿ ಎದ್ದು ಮತ್ತೊಮ್ಮೆ ಜೀಪಿನಲ್ಲಿ ಕುಳಿತಿರುವ ಉಗ್ರನೋರ್ವನ ಕಾಲು ಹಿಡಿಕೊಂಡಳು.

ಜೀಪ್ ಹೊರಡಲಾರಂಭಿಸಿತು. ತಾಯಿ ಹಿಡಿದ ಕಾಲನ್ನು ಬಿಡಲೇ ಇಲ್ಲ. ದಮ್ಮಯ ನನ್ನ ಮಗನನ್ನು ಬಿಟ್ಟು ಬಿಡಿ ಬಿಟ್ಟು ಬಿಡಿ ಎಂದು ಬೇಡುತ್ತಲೇ ಹಿಡಿದ ಕಾಲಿನಲ್ಲಿ ನೇತಾಡುತ್ತಲೇ ಓಡಿದಳು.
ಹಿಂದೆ ಗನ್ ಹಿಡಿದುಕೊಂಡು ನಿಂತಿದ್ದ ಉಗ್ರ ಒದ್ದ.
ಹೆಂಗಸು ರಸ್ತೆಗೆ ಬಿದ್ದಳು. ಬಿದ್ದಲ್ಲಿಂದ ಮತ್ತೆ ಜೀಪಿನೆಡೆಗೆ ಓಡಿ ಬರಲೆತ್ನಿಸುವುದನ್ನು ಉಗ್ರ ಕನ್ನಡಿಯಲ್ಲಿ ಕಂಡ. ಹಿಂದೆ ತಿರುಗಿದ, ಓಡಿ ಬರುತ್ತಿದ್ದ ಆ ಹೆಂಗಸಿನ ಕಡೆಗೊಮ್ಮೆ ನೋಡಿದ.  ಉಗ್ರನಿಗೂ ಮನಸ್ಸು ಕರಗಿತೋ ಏನೊ. ಜೀಪನ್ನು ನಿಲ್ಲಿಸುವಂತೆ ಹೇಳಿದ. ಹೆಂಗಸು ತನ್ನ ತಾಯಿಯಂತೆ ಕಂಡಿತೋ ಏನೊ. ಕಿಸೆಯಿಂದ ಒಂದು ವಿಸಿಟಿಂಗ್ ಕಾರ್ಡ್ ತೆಗೆದು ಓಡೋಡಿ ಬರುತ್ತಿದ್ದ ತಾಯಿಗೆ  ಬಿಸಾಡಿದ.

“ಅದರಲ್ಲಿ ನಮ್ಮ ಆಫೀಸಿನ ಅಡ್ರೆಸ್ ಇದೆ. ನಾಳೆ ನಮ್ಮ ಆಫೀಸಿಗೆ ಬಾ.” ಜೀಪ್ ಹೊರಟಿತು. ಬಿಸಾಡಿದ ವಿಸಿಟಿಂಗ್ ಕಾರ್ಡ್ ವೇಗವಾಗಿ ಹೊರಟ ವಾಹನಗಳ ಗಾಳಿಯ ವೇಗಕ್ಕೆ ವಶವಾಗಿ ಅದೇ ದಿಕ್ಕಿಗೆ ಹಾರುತ್ತಿತ್ತು. ಕುಂಟುತ್ತಾ ಓಡಿ ಹೋಗಿ ವಿಸಿಟಿಂಗ್ ಕಾರ್ಡನ್ನು ಹಿಡಿದುಕೊಂಡಳು ತಾಯಿ.

ತನ್ನ ಮಗ ತಲುಪುಬಹುದಾದ ಜಾಗದ ಅಡ್ರಸನ್ನು ಗಟ್ಟಿಯಾಗಿ ಹಿಡಿದುಕೊಂಡಳು ತಾಯಿ. ಮನೆಗೆ ಹಿಂತಿರುಗಿದಳು. ಆ ಅಡ್ರಸಿಗೆ ತಾನು ತಲುಪಬಹುದಾದ ದಾರಿ ಮತ್ತು ಪ್ರಯಾಣದ ಬಗ್ಗೆ ಯೋಚಿಸಿದಳು.

ತನಗೆ ಹುಟ್ಟಿದ ಮಗನನ್ನು ಕಳೆದಕೊಂಡ ತಾಯಿ, ಲೋಕಕ್ಕೆ ಬೆಳಕನ್ನು ನೀಡುವ ಸೂರ್ಯನ ಹುಟ್ಟಿಗಾಗಿ ಕಾದಳು.

ಹೊರಟಳು ತಾಯಿ, ಕಳೆದುಕೊಂಡ ಮಗನನ್ನು ಪಡೆದುಕೊಳ್ಳಲು ಹೊರಟಳು.

ಉಗ್ರರು ಕೊಟ್ಟ ವಿಳಾಸಕ್ಕೆ ತಲುಪಿದಳು.

ವಿಸಿಟಿಂಗ್ ಕಾರ್ಡ್ ತೋರಿಸಿ ಘಟನೆಯನ್ನು ವಿವರಿಸಿ ಒಳ ಹೋಗಲು ಅಪ್ಪಣೆಗಾಗಿ ಕಾದಳು.

ಅಷ್ಟರಲ್ಲಿ ಅವಳನ್ನು ಒಳಗೆ ಕಳುಹಿಸುವಂತೆ ಒಳಗಿನಿಂದ ಒಂದು ಮೆಸ್ಸೇಜ್ ಬಂತು.

ವಿಸಿಟಿಂಗ್ ಕಾರ್ಡ್ ಬಿಸಾಡಿದವನ ಮುಖ ಕಂಡು ಸಂತೋಷಗೊಂಡಳು ತಾಯಿ.

ಓಡಿ ಹೋಗಿ ಆತನ ಮುಂದೆ ಮಂಡಿಯೂರಿ ನಿಂತು ಆತನ ಎರಡೂ ಕಾಲನ್ನು ತಬ್ಬಿಕೊಂಡಳು.

ಎಲ್ಲಿ ನನ್ನ ಮಗ..? ದಯಮಾಡಿ ಕಳುಹಿಸಿಕೊಡಿ.

ಡೋಂಟ್ ವರಿ, ಒಳಗೆ ಇದ್ದಾನೆ, ಬರ್ತಾನೆ.

ಈಗ ಊಟದ ಸಮಯ ಬನ್ನಿ ಊಟ ಮಾಡಿ ಆಮೇಲೆ ನಿಮ್ಮ ಮಗನನ್ನು ಕರೆದುಕೊಂಡು ಹೋಗುವಿರಂತೆ.

ಉಗ್ರನೊಳಗೆ ದೇವರೇ ಕಂಡಿದ್ದರು ಆ ತಾಯಿಗೆ. ಮೊಣಕಾಲೂರಿದಲ್ಲಿಂದ ಎದ್ದು ಊಟಮಾಡಲು ಹೇಳಿದ ಉಗ್ರನನ್ನು ತಬ್ಬಿಕೊಂಡಳು. ಹಣೆಗೊಂದು ಮುತ್ತನ್ನು ನೀಡಿದಳು.

ಅಬ್ಬಾ ಎಷ್ಟು ಒಳ್ಳೆಯ ಉಗ್ರ. ಇಂತಹ ಉಗ್ರನಿಗೆ ಜನ್ಮ ನೀಡಿದ ತಾಯಿ ಪುಣ್ಯಾತ್ಮಳು ಎಂದುಕೊಳ್ಳುತ್ತಾ ಆತ ತಟ್ಟೆ ಇಟ್ಟ ಎದುರಿನ ಕುರ್ಚಿಯಲ್ಲಿ ಕುಳಿತಳು.
ಒಬ್ಬ ಆ ತಾಯಿಗೆ ಊಟ ಬಡಿಸಿದ. ಇನ್ನೊಬ್ಬ ನೀರು ತಂದು ಕೊಟ್ಟ. ಇನ್ನೊಂದಷ್ಟು ಜನ ಉಗ್ರರು ಬಂದು ಅವಳ ಸುತ್ತಾ ಕೈ ಕಟ್ಟಿ ನಿಂತರು.
ಮಾತಾಡುತ್ತಾ ಮಾತಾಡುತ್ತಾ ಊಟ ಮುಗಿಸಿದಳು ತಾಯಿ.
ಒಬ್ಬ ಕೈ ತೊಳೆಯಲು ನೀರು ತಂದು ಕೊಟ್ಟ.
ಉಗ್ರರ ಊಟ ಉಂಡು, ಸತ್ಕಾರ ಕಂಡು, ತಾನು ಇಲ್ಲೇ ಇದ್ದರೆ ಹೇಗೆ…? ಇವರೆಲ್ಲರಿಗೂ ತಾನು ತಾಯಿಯಾಗಿ ಇವರೊಡನೇ ಇದ್ದು, ಇವರೆಲ್ಲರ ಮನಸ್ಸನ್ನು ಗೆದ್ದು ಇವರೆಲ್ಲರ ಬದುಕನ್ನೇ ಬದಲಿಸಬಹುದಲ್ವಾ ಎಂಬ ಆಸೆಪಟ್ಟುಕೊಂಡಳು.
ಸರಿ ಮಕ್ಕಳೇ ನೀವು ಹೇಳಿದಂತೆ ನೀವಿದ್ದಲ್ಲಿಗೆ ಬಂದೆ. ನೀವು ಹೇಳಿದಂತೆ ಊಟ ಮಾಡಿದೆ. ಇನ್ನು ನಾನು ಹೊರಡಬೇಕು.
ನನ್ನ ಮಗನನ್ನು ನನ್ನೊಡನೆ ಕಳುಹಿಸಿಕೊಡಿ ನಾನು ಹೊರಡುವೆ.

ಅಷ್ಟರಲ್ಲಿ ಸುತ್ತ ನಿಂತಿದ್ದ ಉಗ್ರರು ತಾಯಿ ಸುತ್ತ ಕುಣಿಯುವುದಕ್ಕೆ ಆರಂಭಿಸಿದರು.

ಕುಣಿಯುತ್ತಿರುವ ಉಗ್ರರ ಮಧ್ಯದಿಂದ ಸುತ್ತ ಇಣುಕಿದಳು ತನ್ನ ಮಗನು ಬರಬಹುದಾದ ದಿಕ್ಕಿನೆಡೆಗೆ.

ಕುಣಿಯುವುದನ್ನು ನಿಲ್ಲಿಸಿದ ಉಗ್ರರೆಲ್ಲರೂ ತಾಯಿಯನ್ನೇ ನೋಡಲಾರಂಭಿಸಿದರು.

ಎಲ್ಲಿ ನನ್ನ ಮಗ..! ಕಳುಹಿಸಿಕೊಡಿ ಹೊರಡುತ್ತೇವೆ ನಾವು.

ಎಲ್ಲರೂ ಬೊಬ್ಬಿಟ್ಟು ನಗಾಡಿದರು…!

ಎಲ್ಲಿ ನಿನ್ನ ಮಗ….?

ಈಗ ನಾವು ಹೇಗೆ ನಿನ್ನ ಮಗನನ್ನು ಕಳುಹಿಸಿಕೊಡುವುದು …?
ನೀನು ಈಗ ನಮ್ಮಲ್ಲಿ ಊಟ ಮಾಡಿದೆಯಲ್ಲಾ..?
ಇನ್ನು ಹೇಗೆ ನಾವು ನಿನ್ನ ಮಗನನ್ನು ಕಳುಹಿಸಿಕೊಡುವುದು….?
ನಾವು ಎಲ್ಲಿಂದ ನಿನ್ನ ಮಗನನ್ನು ಕಳುಹಿಸಿಕೊಡುವುದು …!
ನೀನು ಆಗಲೇ ಕರೆದುಕೊಂಡು ಹೋದೆಯಲ್ಲಾ….!

ಮತ್ತೆ ಸುತ್ತ ನಿಂತಿದ್ದ ಉಗ್ರರು ತಾಯಿಯ ಸುತ್ತ ಕುಣಿದರು.
ತಾಯಿಗೆ ಏನೂ ಅರ್ಥ ಆಗದೆ ಸುತ್ತ ನೋಡುತ್ತ ತನ್ನ ಮಗ ಬರಬುಹುದಾದ ದಾರಿಯ ಕಡೆಗೆ ಇಣುಕುತ್ತಿದ್ದಳು.

ದಯಮಾಡಿ ನನ್ನ ಮಗನನ್ನು ಕಳುಹಿಸಿಕೊಡಿ ಎಂದು ಬೊಬ್ಬಿಟ್ಟಳು.

ಕುಣಿಯುತ್ತಿದ್ದ ಉಗ್ರರೆಲ್ಲಾ ಒಂದು ಕ್ಷಣ ನಿಂತು ಬಿಟ್ಟರು.

ದಯಮಾಡಿ ನನ್ನ ಮಗನ್ನು ಕಳುಹಿಸಿಕೊಡಿ ಎಂದು ಬೇಡಿದಳು
ಮತ್ತೆ ಜೋರಾಗಿ ನಗಾಡಿದರು…,
ಎಲ್ಲಿಂದ ಕಳುಹಿಸಿಕೊಡಲಿ ನಿನ್ನ ಮಗನನ್ನು

ನೀನು ಈಗ ಊಟ ಮಾಡಿದೆಯಲ್ಲಾ…..!
ನಿನ್ನ ಮಗನ ಮಾಂಸವನ್ನೇ ನೀನು ಈಗ ಉಂಡದ್ದು…!
ನಿನ್ನ ಮಗನನ್ನು ಕೊಂದು ಅವನ ಮಾಂಸವನ್ನೆ ಅಡುಗೆ ಮಾಡಿ ನಿನಗೆ ಬಡಿಸಿದ್ದು ನಾವು.

ಮಗನ ಮಾಂಸವನ್ನೇ ಅಡುಗೆ ಮಾಡಿ, ಆ ಮಗನ ತಾಯಿಗೇ ಉಣ್ಣಿಸಿದ ಉಗ್ರರು ನಾವು…

ಮತ್ತೆ ಉಗ್ರರ ಉಗ್ರ ಡ್ಯಾನ್ಸ್…!

ISIS ಉಗ್ರರು ಸಿರಿಯಾದ ಕುರ್ದಿಸ್ತಾನ್ ಎಂಬಲ್ಲಿ ಮಾಡಿದ ಈ ನೈಜ ಕೃತ್ಯ
ದಿನಾಂಕ 2 ಮಾರ್ಚ್ 2015 ರಂದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.

ಆ ನೈಜ ಘಟನೆಯ ಸುದ್ದಿಯನ್ನೇ ಆಧಾರವಾಗಿಟ್ಟುಕೊಂಡು ಬರೆದ ಕಥೆ ಇದು.


⭕🔔⭕

ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

9900500832

09/07/2020


🌿🌹🌿🌹🌿🌹🌿

Saturday, February 29, 2020

🌺🦋🌺🦋🌺🦋🌺

ಅಮ್ಮಾ ನೀನೇಕೆ ಅಮ್ಮನಾಗದೆ ಹೋದೆ?

🌺🦋🌺🦋🌺🦋🌺

ಅಮ್ಮ ನಾನು ಬೆಣ್ಣೆ ಕದ್ದೆನಮ್ಮ. ಮಣ್ಣು ತಿಂದೆನಮ್ಮ

ಹೌದಮ್ಮ ನಾನು ಮಣ್ಣೇ ತಿಂದೆನಮ್ಮ

ನೀನು ನನ್ನ ಬಾಯಿ ಬಿಡಿಸಲಿಲ್ಲಮ್ಮ. ನಾನು ಬಾಯಿ ಬಿಟ್ಟಾಗ ಕಾಣುವ ನನ್ನ ಕರಾಳ ವಿಶ್ವದ ರೂಪವನ್ನು ನೋಡುವ ಸಾಮರ್ಥ್ಯ ನಿನ್ನಲ್ಲಿಲ್ಲವೆಂದು ತಾನೇ ನೀನು ನನ್ನ ಬಾಯಿ ಬಿಡಿಸದೆ ನನ್ನನ್ನೇ ಬಿಟ್ಟು ಹೋಗಿದ್ದು.

ಅಮ್ಮ ನೀನು ಯಶೋದೆಯಾಗಲಿಲ್ಲ...! ಯಾಕೆ...? ಹೌದು ನಾನು ಕೃಷ್ಣನಾಗಲು ಸಾಧ್ಯವೇ?

ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲ ಎಂದರಿತ ಬುದ್ಧ ಬೆಳಗಾಗಬಹುದಾದ ಆ ಕತ್ತಲಲ್ಲೇ ತನ್ನ ಮನೆಯಲ್ಲಿದ್ದ ಸಾಸಿವೆಯನ್ನು ಚೆಲ್ಲಿ ಹೊರ ನಡೆದು ಹೋದ.

ಅವನೇನೋ ಆಸೆಯನ್ನು ಬಿಟ್ಟು ಸುಖಿಯಾಗಲು ಹೋದ.

ಆದರೆ ಬುದ್ಧ ಚೆಲ್ಲಿ ಹೋದ ಆ ಸಾಸಿವೆಯನ್ನು ಹೆಕ್ಕುತ್ತಾ ಸಾವಿನಂತಹ ಆ ಮನೆಯಲ್ಲಿ ತನ್ನ ಬದುಕಿಗೆ ಒಗ್ಗರಣೆ ಹಾಕಬೇಕಾದ ಅವನ ಹೆಂಡತಿಯ ಆಸೆಗೆ ಯಾರು ಕಿವಿಯಾಗಬೇಕಮ್ಮ.

ಸಾವೇ ಇಲ್ಲದ ನನ್ನ ತಪ್ಪುಗಳು ನನ್ನಲ್ಲೇ ಮನೆ ಮಾಡಿಯಾಗಿತ್ತು. ನನ್ನದು ಸಾವಿರುವ ಮನೆಯ ಸಾಸಿವೆಯ ಮನಸ್ಸಾಗಿ ಹೋಯ್ತು. ನಿನ್ನದು ಬುದ್ಧನ ದಾರಿ ಹಿಡಿದ ಮನಸ್ಸಾಗಿ ಹೋಯ್ತು.

ಅಮ್ಮ ನಾನು ನನ್ನ ಅಮಲಿನ ತೊಟ್ಟಿಲಲ್ಲೆ ಇದ್ದೆನಮ್ಮ.

ಎಚ್ಚರಗೊಂಡಾಗ ನೀನಿರಲಿಲ್ಲ.

ಅಮ್ಮ ಒಂದು ವೇಳೆ ಎಚ್ಚರ ತಪ್ಪುವ ಆ ಚಿರ ನಿದ್ದೆಯೇ ಬಂತೆಂದರೆ ನೀ ಮತ್ತೆ ಬರುವೆಯಾ..!

ಬಂದು ಬರಿದಾದ ಸೂತಕದ ತೊಟ್ಟಿಲನು ಬಿಚ್ಚಿಡುವೆಯಾ....?

ಅಮ್ಮ ನಿಜವಾಗಿಯೂ ಎಚ್ಚರಗೊಂಡಿದ್ದೇನೆ. ಎಚ್ಚೆತ್ತುಕೊಂಡಿದ್ದೇನೆ. ಇನ್ನೆಂದೂ ನಿದ್ದೆ ಬಾರದಂತೆ ಎಚ್ಚರಗೊಂಡಿದ್ದೇನೆ.

ಒಮ್ಮೆ ಬಂದು ಬಿಡಮ್ಮ.

ತೊಟ್ಟಿಲಿಗೆ ಹತ್ತಿಸಿದವಳು ನೀನೇ ಅಲ್ವಮ್ಮ.

ಈಗ ತೊಟ್ಟಿಲಿಂದ ಇಳಿಯೊದಾದರು ಹೇಗೆ.

ಹಾರಿದರೆ ಉಳಿದೀತೆ ಸೊಂಟ.

ಹ್ಹಾಂ… !
ಹಾರಾಡಿದ್ದು ಸಾಕೆಂದೇ....? ಇಳಿಯಲಾರದಷ್ಟು ಎತ್ತರದ ತೊಟ್ಟಿಲಿಗೇರಿಸಿ ಹೊರಟೇ ಹೋದೆಯ ತಾಯಿ.

ಅಮ್ಮ ನೀ ಹೊರ ಹೋಗುವಾಗ ಮುಚ್ಚಿದ ಬಾಗಿಲ ಚಿಲಕ ತೆಗೆಯುವಾಗ ಆ ಚಿಲಕ ಮಾತಾಡದಂತೆ ಅದರ ಕತ್ತನ್ನು ಬಿಗಿ ಹಿಡಿದಿದ್ದೆಯಂತೆ ಹೌದೆ?

ಹೌದು ನಾನು ಎಚ್ಚರಗೊಂಡರೆ ನಿನ್ನ ಹಿಡಿದಿಟ್ಟು ಕೊಳ್ಳುವೆನೆಂದಲ್ಲವೇ....?

ಅಮ್ಮ ಹೇಗಮ್ಮ ಎಲ್ಲವನ್ನು ತೊರೆದು ಹೋಗುವ ವೈರಾಗ್ಯದ ಕ್ರೂರತೆ ನಿನಗೆ ಬಂದಿದ್ದು.... ಹೇಗಮ್ಮ?

ಅಂದು ಬುದ್ದನಿಗೂ ಇದೇ ವೈರಾಗ್ಯದ ಕ್ರೂರತೆ ಬಂದಿದ್ದಾ…?

ಚಿಲಕ ತೆಗೆದ ಮೇಲೆ ಬಾಗಿಲು ತೆಗೆಯುವಾಗ, ಬಾಗಿಲ ಬಾರವನ್ನು ಹೊತ್ತ ಬೀಜಾಗ್ರದ ಭಾರವನ್ನು ನೀನೇ ಹೊತ್ತು ಬಾಗಿಲನ್ನು ಎತ್ತಿ ತೆಗೆದೆಯಂತೆ ಹೌದಾ…? ನಾನು ಬೀಜಾಗ್ರವನ್ನು ನೋಡಿದಾಗ ಅದರ ನಾಲಗೆಯಲ್ಲಿ ಎಣ್ಣೆಯ ಪಸೆ ಅರಿಯುತ್ತಿತ್ತು.  ಪಾಪ ಅದರ ನಾಲೆಗೆ ಹೊರಳದಂತೆ ಎಣ್ಣೆ ಅಂಟಿತ್ತು. ಇಲ್ಲದೇ ಇದ್ದರೆ ನೀನು ಹೊರಗೆ ಹೋಗುವಾಗ ಅದಾದರೂ ನನ್ನನ್ನು ಕರೆಯುತ್ತಿತ್ತು.

ಅಮ್ಮ ನೀವು ಮನೆಯಿಂದ ಹೊರಗೆ ಹೋಗುವಾಗ ಬಾಗಿಲ ಕಡೆಗೆ ನೋಡಿಲ್ವಾ.....!

ತಪ್ಪೊಪ್ಪಿಕೊಂಡ ಕಂದನ ಬಿಟ್ಟು ಹೋಗಬೇಡಮ್ಮ ತಾಯಿ.

ತಾಯಿ ಮನಸ್ಸು ಮಾಡಿದರೆ ಆಕೆಗೆ ಇನ್ನೊಂದು  ಮಗುವಾಗ ಬಹುದು. ಆದರೆ ಮಗುವಿಗೆ ಇನ್ನೊಂದು ತಾಯಿ ಸಿಗುವುದುಂಟೆ ಈ ಜಗದಲ್ಲಿ.

ಅಮ್ಮ ತಪ್ಪಾಗಿದೆ. ತಪ್ಪನ್ನೊಪ್ಪಿಕೊಂಡಿರುವೆ. ಶಿಕ್ಷೆಯನ್ನು ನಿಮ್ಮೆದೆರೇ ಅನುಭವಿಸುವ ಅವಕಾಶ ಕೊಡಿ. ಕೊರಗಿ ಕೊರಗಿ ನಿನ್ನ ಬೇಡುತಿಹುದು ತಾಯಿ. ಬಂದು ಬಿಡು.

ಹ್ಹೂಂ ನನ್ನ ಮಗುವಿಗೆ ಅಮ್ಮ ಆಗಬೇಕಾದ ನಿನ್ನನ್ನು ಅಮ್ಮ ಅಂತನೇ ಹೇಳ್ತಾ ಇದ್ದೆ-ನಲ್ಲ...?

ಅಮ್ಮಾ ನನಗೆ ಅಮ್ಮ ಆಗಿದ್ದವಳು ನೀನು. ನನ್ನ ಮಗುವಿಗೆ ಅಮ್ಮ ಆಗುವುದಕ್ಕಿಂತ ಮುಂಚೆ ಹೊರಟೇ ಹೋದೆಯಲ್ಲ ತಾಯಿ.

"ನೀನು ಬಿಡಪ್ಪ, ನೀನು ಸಕಲ ಕಲಾವಲ್ಲಭ ನೀನು" ಅಂತ
ಮಾತಿನ ಮಧ್ಯೆ ಗೆಳೆಯನೊಬ್ಬ ನನ್ನನ್ನು ಕುರಿತು ಹೇಳುತ್ತಿದ್ದ.

ಸಕಲ ಕಲಾ ವಲ್ಲಭನಂತೆ....!

ಹ್ಹೂಂ ಎಷ್ಟೊಂದು ಚುಚ್ಚುತಾ ಇದೆ ಗೊತ್ತಾ ಈ ಮಾತು.

ನಿನಗೊಬ್ಬಳಿಗೇ ವಲ್ಲಭನಾಗಿ ಉಳಿಯಲಾರದೆ ತಿರಸ್ಕೃತನಾದ ಮೇಲೆ ಅದ್ಯಾವ ಕಲೆಗೆ ವಲ್ಲಭನಾಗುವ ಗಂಡಸುತನ ನನ್ನಲ್ಲಿ ಉಳಿದೀತು.

ಹೋದೆಯಲ್ಲ ಬರುವ ಮನಸ್ಸು ಮಾಡದೇ ದೂರ ನಿಂತೆಯಲ್ಲ.

ಅಮ್ಮ ನಾನು ಇಲ್ಲದೆ ನೀನು ಅಮ್ಮ ಆಗುವುದಕ್ಕೆ ಸಾಧ್ಯನಾ.....?

ಅಥವಾ


ನನಗಲ್ಲದೆ, ನಾನಿಲ್ಲದೆ ನೀನು ಅಮ್ಮನಾಗುವೆ ಎಂದು ಹೊರಟೆಯಾ ತಾಯಿ..?

ಹಾಗಾದರೆ..!

ಅಮ್ಮ ನೀನಿಲ್ಲದ ಮೇಲೆ ನಾನ್ಯಾಕೆ..?

ಅಮ್ಮಾ ನೀ ನಿಲ್ಲದ ಮೇಲೆ ನಾ ನಿಲ್ಲಲ್ಯಾಕೆ...?


ಕಾಯುತ್ತಿರುವೆನೆಂದು ಹೇಳಲೇ ಕಾದು ಕಾದು ಕಾದು ಹೋದರೆ ಸೀದು ಹೋಗುವುದಲ್ಲಾ.

ಬೇಯುವವರೆಗೆ ಕಾಯಲಾರದೆ ಕಾದು ಕಾದಾಡಿದವರು ನಾವು.

ಆದರೂ ಕಾಯಬೇಕಂತೆ...!

ಕೊತ ಕೊತ ಕುದಿಯುವ ಎಣ್ಣೆಗೆ ಇಣುಕಿದರೆ ಮುಖದ ಪ್ರತಿಬಿಂಬ ಕಾಣುವುದಿಲ್ಲವಂತೆ.

ಕಾಯುತ್ತಿರುವ ಎಣ್ಣೆ ಆರುವವರೆಗೆ ಕಾಯಬೇಕಂತೆ. ತಣ್ಣಗಾದ ಮೇಲೆ ಇಣುಕಿದರೆ ಮುಖ ಕಾಣುತ್ತದೆಯಂತೆ.

ಕನ್ನಡಿಯಲ್ಲಿಯೂ ನೋಡಲಾಗದ ಈ ಮುಖವನ್ನು ಕಾದ ನೀನು ತಣ್ಣಗಾಗುವವರೆಗೆ ಕಾಯಬೇಕ ನಿನ್ನಲ್ಲಿ‌ ನನ್ನನ್ನು ನೋಡಲು.

ಕುದಿಯುತ್ತಿರುವ ಎಣ್ಣೆ ಆರೀತೆಂದು ಕಾಯುತ್ತಾ ಕುಳಿತೆರೆ ಪೂರ್ತಿ ಆವಿಯಾಗಿ ಹೋದೀತೆಂಬ ಅಭದ್ರತೆಯಿಂದ ಉರಿಯನ್ನು ತಣಿಸಲೆಂದು‌ ಬಳಿ ಬಂದರೆ ಸುಟ್ಟೇ ಬಿಟ್ಟೆಯಲ್ಲಮ್ಮಾ.



29-02-2016




💈ಸುಧಾಕರ ಜೈನ್ ಹೊಸಬೆಟ್ಟು ಗುತ್ತು


☮☮☮☮☮☮☮☮☮

Thursday, October 10, 2019

🏮⚜🏮⚜🏮⚜🏮


ಅಂಗೈಯಲ್ಲೊಂದು ಅಹಂಕಾರದ ಕಣ್ಣು


🏮⚜🏮⚜🏮⚜🏮


🧭 29/09/2019


⭕ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

🔗 9900500832


📿 📍📿

ಅಂಗೈಯಲ್ಲೊಂದು ಅಹಂಕಾರದ ಕಣ್ಣು

📿📍📿


ಮುಖದಲ್ಲಿರುವ ಕಣ್ಣುಗಳಲ್ಲಿ ನಾವು ಜಗತ್ತನ್ನು ನೋಡುತ್ತೇವೆ.

ನಾವು ನೋಡಿದ ಜಗತ್ತನ್ನು, ನಾವು ನೋಡುವ ಜಗತ್ತಿಗೆ, ನಾವು ನೋಡದ ಜಗತ್ತಿಗೆ ತೋರಿಸ ಬಯಸುತ್ತೇವೆ.

ಮೆದುಳಿನ ಒಳಗಣ್ಣು ಮತ್ತು ಹೃದಯದ ಒಳಗಣ್ಣನ್ನು ಮುಚ್ಚುತ್ತೇವೆ ಅಂಗೈಯಲ್ಲಿರುವ ನಮ್ಮ ಅಹಂಕಾರದ ಕಣ್ಣನ್ನು ಆನ್ ಮಾಡುತ್ತೇವೆ.  ವೀಡಿಯೋ ಮಾಡಿ ನಾವು ನೋಡುವ ಜಗತ್ತಿಗೆ, ನಾವು ನೋಡದ ಜಗತ್ತಿಗೆ ತೋರಿಸಿ ಬಿಡುತ್ತೇವೆ.


ನೋಡಬಾರದ್ದನ್ನು, ನೋಡಬಾರದು ಎಂದು, ಅನಿಮಿಷರಾದ ದೇವತೆಗಳಿಗೆ ಇಲ್ಲದ ರೆಪ್ಪೆಗಳು ಮನುಷ್ಯನ ಕಣ್ಣುಗಳಿಗೆ ಇವೆ.

ಆದರೆ ನೋಡಬಾರದ ಜಗತ್ತನ್ನೇ ನೋಡ ಬಯಸುತ್ತೇವೆ. ಮುಚ್ಚಬಹುದಾದ ರೆಪ್ಪೆಗಳನ್ನೂ ಅರಳಿಸಿ ನೋಡುತ್ತೇವೆ.

ಭೃಗು  ಮಹರ್ಷಿ ಪಾದದಡಿಯಲ್ಲಿ ಅಂದರೆ ಅಂಗಾಲಿನಲ್ಲೊಂದು ಕಣ್ಣು ಇತ್ತು.

ಅದು ಭೃಗು ಮಹರ್ಷಿಗಳಿಗೆ ದೊಡ್ಡ ಅಹಂಕಾರವನ್ನೇ ಕೊಟ್ಟಿತ್ತು.

ಆ ಅಹಂಕಾರವನ್ನು ಕಿತ್ತು ಹಾಕಬೇಕೆಂಬ ಉದ್ಧೇಶದಿಂದ,

ಪಾಲನಾ ಕರ್ತನಾದ ವಿಷ್ಣು ಭೃಗು ಮಹರ್ಷಿಗಳ ಪಾದವನ್ನು ಹಿಡಿದುಕೊಂಡು ಆ ಅಹಂಕಾರದ ಕಣ್ಣನ್ನೇ ಕಿತ್ತು ತೆಗೆದೆ.

ಈಗ ನಮ್ಮೊಳಗಿನ ನಮ್ಮ ಪಾಲನಾ ಕರ್ತನಾದ ನಮ್ಮದೇ ಪ್ರಬುದ್ಧ ಬುದ್ಧಿಯೆಂಬ ವಿಷ್ಣು ನಮ್ಮ ಅಂಗೈಯಲ್ಲಿರುವ ಅಹಂಕಾರದ ಕಣ್ಣನ್ನು ಕಿತ್ತು ತೆಗೆಯಬೇಕಾದ ಕಾಲಕ್ಕೆ ಬಂದು ನಿಂತಿದ್ದೇವೆ.


ಬ್ರಹ್ಮನ ಸಭೆಯಲ್ಲಿ ಗಂಗೆಯ ಸೀರೆಯ ಸೆರಗು ಜಾರಿತು.
ದೇವತೆಗಳೆಲ್ಲಾ ರೆಪ್ಪೆಗಳಿಲ್ಲದ ತಮ್ಮ ಕಣ್ಣುಗಳಿಗೆ ತಮ್ಮತಮ್ಮ ಅಂಗೈಯನ್ನಡ್ಡ ಹಿಡಿದುಕೊಂಡರು.

ಆದರೆ ಭೂಲೋಕದಿಂದ ಹೋದ ಮಹಾಭಿಷ ರೆಪ್ಪೆಗಳನ್ನರಳಿಸಿ  ನೋಡಬಾರದ್ದನ್ನು ನೋಡಿದ

ಏರಿ ಹೋಗಿದ್ದ ಎತ್ತರದಿಂದ ಕೆಳಗೆ ಇಳಿದು ಬಂದ.

ಇನ್ನೂ ಮೇಲೆ ಏರದ ನಾವೂ ನೋಡಬಾರದ ಜಗತ್ತನ್ನು ನೋಡ ಬಯಸುತ್ತೇವೆ.

ನೋಡಬಾರದ ಜಗತ್ತನ್ನು ನೋಡ ಬಯಸುವ ನಾವು,
ನಾವು ನೋಡುವ, ನಾವು ನೋಡದ ಜಗತ್ತಿಗೆ ತೋರಿಸ ಬಯಸುತ್ತೇವೆ.

ಇತ್ತೀಚೆಗೆ ನಡೆದ ಒಂದು ಘಟನೆಯ ವೀಡಿಯೋ ವೈರಲಾಯ್ತು.

ಮಾಲ್ ಒಂದಕ್ಕೆ ಹೋಗಿದ್ದ ಹೆಣ್ಣೋರ್ವಳು ಒಂದೆರಡು ಬಟ್ಟೆಗಳನ್ನು ಕದ್ದುಬಿಡುತ್ತಾಳೆ.

ಕದ್ದ ಬಟ್ಟೆಗಳನ್ನು ಬ್ಯಾಗಿನೊಳಗೆ ತುಂಬಿಸಿಕೊಂಡು ಹೊರಗೆ ಹೋಗುವಾಗ ಸಿಕ್ಕಿಹಾಕಿಕೊಳ್ಳುತ್ತಾಳೆ.

ಮಾಲ್ ನ ಮೇಲ್ವಿಚಾರಕನು ಆ ಬಟ್ಟೆಗಳನ್ನು ಕದ್ದ ಹುಡುಗಿಯನ್ನು ನಿಲ್ಲಿಸಿ ವಿಚಾರಣೆ ಮಾಡುತ್ತಾನೆ.
ವಿಚಾರಣೆಯನ್ನು ವೀಡಿಯೋ ಮಾಡುತ್ತಾನೆ.  ಮಾತ್ರವಲ್ಲದೆ ಆಕೆಯ ಪರ್ಸ್
ನಲ್ಲಿದ್ದ ಅವಳ ಗಂಡನಾದ ಪೋಲಿಸರೊಬ್ಬರ ಫೋಟೋವನ್ನೂ ತೋರಿಸುತ್ತಾನೆ.
ಈ ಪ್ರಕರಣದಲ್ಲಿ ಭಾಗಿಯಾಗದ ಅವಳ ಗಂಡನ ಮಾನಕ್ಕೂ ಹಾನಿ ಮಾಡುತ್ತಾನೆ.



ಕದ್ದದ್ದು ತಪ್ಪು ಹೌದೇ ಹೌದು. ಆದರೆ ಆ ಹುಡುಗಿಯಲ್ಲಿರುವ ಕಳ್ಳತನದ ದುಷ್ಟತನಕ್ಕಿಂತ ಈ ವೀಡಿಯೋ ಮಾಡಿ ಲೋಕಾರ್ಪಣೆ ಮಾಡಿದವನಲ್ಲಿ ಹೆಚ್ಚಿನ ಕ್ರೂರತೆಯ ಅಹಂಕಾರದ ದುಷ್ಟತನ ಕಾಣುತ್ತದೆ.


ಆ ಮೇಲ್ವಿಚಾರಕರಿಗೆ ಎರಡು ನ್ಯಾಯಯುತವಾದ ಆಯ್ಕೆ ಇತ್ತು.

ಒಂದಾ ಪೋಲಿಸ್ ಕಂಪ್ಲೇಂಟ್ ಕೊಟ್ಟು ಆಕೆಯನ್ನು ಪೋಲಿಸರ ವಶಕ್ಕೆ ಒಪ್ಪಿಸುವುದು.

ಅಥವಾ ಹೃದಯವಂತಿಕೆಯ ಮನುಷ್ಯನಾಗಿ ಆ ಹುಡುಗಿಯ ಪರಿಸ್ಥಿತಿ ಮತ್ತು ಮನಸ್ಥಿತಿಯನ್ನು ಅರಿತು ಸರಿಯಾಗಿ ವಿಚಾರಿಸಿ ಆಕೆಗೆ, ಆಕೆ ಕದ್ದ ಬಟ್ಟೆಗಳನ್ನೇ ಉಡುಗೊರೆಯಾಗಿ ಕೊಟ್ಟು ಬಿಡಬೇಕಿತ್ತು.

ಈ ತರಹದ ಒಳ್ಳೆಯತನದಿಂದ ಕೆಟ್ಟವರನ್ನೂ ಒಳ್ಳೆಯವರನ್ನಾಗಿಸಿದ ಎಷ್ಟೋ ಘಟಿತ ಘಟನೆಗಳು ಇವೆಯಲ್ಲಾ.

ಒಂದು ಹಂತದ counselling ಮಾಡಿ ಸರಿಯಾಗಿ ಬುದ್ಧಿವಾದ ಹೇಳಿ, ಇನ್ನು ಮುಂದೆ ಇಂತಹ ಪರಿಸ್ಥಿತಿ ಬರದಂತೆ ಮತ್ತು ಈ ಪ್ರಕರಣದಿಂದ ಮಾನಸಿಕವಾಗಿ ಕುಗ್ಗದಂತೆ ಧೈರ್ಯದಿಂದ ಒಳ್ಳೆಯ ರೀತಿಯಲ್ಲಿ ಬದುಕುವಂತೆ ಪ್ರೇರೇಪಿಸಿ ಕಳುಹಿಸಬಹುದಿತ್ತು.

ಅದು ಬಿಟ್ಟು ಆ ರೀತಿ ವೀಡಿಯೋ ಮಾಡಿ, ಮಾನ ಹರಾಜು ಹಾಕಬಾರದಿತ್ತು.

ಮನುಷ್ಯನಿಗೆ ಮಾನಕ್ಕಿಂತ ಮಿಗಿಲಾದದ್ದು ಏನೂ ಇಲ್ಲ.

ಮಾನ ಹೋದ ಮೇಲೆ ಬದುಕು ಬೇಡ ಎಂದು ಆ ಹುಡುಗಿ ಆತ್ಮ ಹತ್ಯೆ ಮಾಡಿಕೊಂಡರೆ..?
ಹೆಂಡತಿಯ ಈ ವಿಡಿಯೋ ನೋಡಿ ಮನನೊಂದ ಗಂಡನ ನಿರ್ಣಯದಿಂದ ದಾಂಪತ್ಯದಲ್ಲಿ ಬಿರುಕಾಗಿ ಗಂಡನಿಂದ ಪರಿತ್ಯಕ್ತಳಾದರೆ.  ಬೇರೆ ದಾರಿ ಇಲ್ಲ ಎಂದು ಆ ಹುಡುಗಿ ಆತ್ಮ ಹತ್ಯೆಯ ದಾರಿ ಕಂಡುಕೊಂಡರೆ…?

ಆಗ ಈ ವೀಡಿಯೋ ಮಾಡಿ ಹಂಚಿದವನು ಮತ್ತು ಹಂಚಿಕೊಂಡವರೆಲ್ಲರೂ ವೀಡಿಯೋ ನೋಡಿಕೊಂಡೇ ಒಂದು ಹೊತ್ತಿನಲ್ಲೇ ಎರಡು ಹೊತ್ತಿನ ಊಟ ಮಾಡಿ ತಿಂದು ತೇಗುತ್ತಾ ಬದುಕು ಮಾಡುತ್ತಾರಾ..?



ಆ ಹುಡುಗಿ ಹಾಗೆ ಕದ್ದ ನಂತರದ ದೃಶ್ಯವೆಲ್ಲಾ ಅಂಗೈಯಲ್ಲಿದ್ದ ಅಹಂಕಾರದ ಕಣ್ಣಿನಿಂದ ವೀಡಿಯೋ ಆಗಿ, ಈಗ ನೋಡಬಾರದ ಜಗತ್ತಿನ ಎಲ್ಲರ ಅಂಗೈಯಲ್ಲಿರುವ ಅದೇ ಅಹಂಕಾರದ ವಿಧವಾ ಕಣ್ಣಿಗೆ ಆಭರಣವಾಯ್ತು.


ಆ ವೀಡಿಯೋ ಮಾಡಿದವನ ಮೆದುಳಿನ ಒಳಗಣ್ಣು, ಹೃದಯದ ಒಳಗಣ್ಣು ಮುಚ್ಚಿಹೋಗಿತ್ತು ಅನ್ನುವುದಕ್ಕಿಂತಲೂ ಕುರುಡಾಗಿತ್ತು ಅಂತಲೇ ಹೇಳಬಹುದು.

ಆದರೆ ಆ ವಿಡಿಯೋವನ್ನು ಫೇಸ್ ಬುಕ್ ವ್ಹಾಟ್ಸಾಪ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರಲ್ಲಾ ಇವರುಗಳ ಬೌದ್ಧಿಕ ಕಣ್ಣೂ ಕುರುಡಾಗಿ ಹೋಗುತ್ತದಲ್ಲಾ…?



ಕಳ್ಳತನಕ್ಕೆ ಸಾವಿರ ಸಾವಿರ ಕಾರಣಗಳು ಇರುತ್ತವೆ.

ಹಾಗಂತ ಆ ಸಾವಿರ ಕಾರಣಗಳಲ್ಲಿ ಯಾವ ಒಂದು ಕಾರಣವೂ ಕಳ್ಳತನವನ್ನು ಸಮರ್ಥಿಸಿಕೊಳ್ಳುವಂತಹುಗಳು ಅಲ್ಲ.


ಆದರೆ ಕಾರಣಗಳು ಶಿಕ್ಷೆಕೊಡುವ ಕ್ರೂರತೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.


ಅಡಿಕೆ ಕದ್ದ ಕಳ್ಳನಿಗೆ ಆನೆ ಕದ್ದ ಕಳ್ಳತನದ ಶಿಕ್ಷೆ ಕೊಡಬಾರದಲ್ಲ.


ಕೈಗೆ ಸಿಕ್ಕ ಕಳ್ಳನಿಗೆ ಕೈಗೆ ಸಿಗದ ಕಳ್ಳನ ಶಿಕ್ಷೆಯನ್ನೂ ಸೇರಿಸಿ ಕೊಡಬಾರದಲ್ವಾ.


ಕದಿಯಲಾರದ ಕದಿಯಬಾರದ ಸ್ಥಿತಿವಂತರೂ ಯಾಕೆ ಕದಿಯುತ್ತಾರೆ…?

ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ರವರು ಹೇಳುವ ಪ್ರಕಾರ,

ಒಬ್ಬ ಮನುಷ್ಯನಲ್ಲಿ ಈ ರೀತಿಯ ಕಳ್ಳತನ ಮಾಡಲು ಮುಖ್ಯ ಕಾರಣ,

 
ಕ್ಲೆಪ್ಟೋಮೇನಿಯಾ ಎಂಬ ಒಂದು ಚಿಕ್ಕ ಮನೋರೋಗ. ಇದನ್ನು ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್ ಅಂತಲೂ ಕರೆಯುತ್ತಾರೆ.

ಇದು ಬಹು ಸುಲಭವಾಗಿ ಗುಣವಾಗುವ ರೋಗವೂ ಹೌದು ಎನ್ನುತ್ತಾರೆ ಈ ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ರವರು.


ಈ ರೋಗದ ಪ್ರಾಥಮಿಕ ಹಂತವಾಗಿ ರಸ್ತೆಯಲ್ಲಿ ಸಿಗುವ ನಾಣ್ಯ ಹೆಕ್ಕುವುದರಿಂದ ಆರಂಭವಾಗಿರುತ್ತದೆ.

ಯಾಕೆಂದರೆ ರಸ್ತೆಯಲ್ಲಿ ಬಿದ್ದಿರುವ ಒಂದು ರೂಪಾಯಿಯದ್ದೋ, ಐದು ರೂಪಾಯಿಯದ್ದೋ ನಾಣ್ಯ ಅದು ನಮ್ಮದಾಗಿರುವುದಿಲ್ಲ.

ಆದರೂ ಅದನ್ನು ಹೆಕ್ಕುತ್ತೇವೆ. ಇನ್ನೂ ಸ್ವಲ್ಪ ದೊಡ್ಡ ಮೊತ್ತದ ಸಂಪತ್ತಾದರೆ ಹೆಕ್ಕುವಾಗ ಯಾರಾದರೂ ನೋಡುತ್ತಾರಾ ಎಂದು ನೋಡುತ್ತೇವೆ.

ಹ್ಹಾಂ…. ! ನಾವು ಮಾಡುವಾಗ ಯಾರೂ ನೋಡಬಾರದು…. ಯಾವ ಕಣ್ಣೂ ನೋಡಬಾರದು….. ಯಾವ ಅಂಗೈ ಕಣ್ಣಲ್ಲೂ ರೆಕಾರ್ಡ್ ಆಗಬಾರದು ಅನ್ನುವ ಜಾಗ್ರತೆ ಇದ್ದೇ ಇರುತ್ತದೆ.

ಆದರೆ ನಾವು ಆ ಗೆರೆಯ ಈಚೆ ಇದ್ದರೆ ರಪ್ಪನೇ ನಮ್ಮ ಅಂಗೈ ಕಣ್ಣನ್ನು ಆನ್ ಮಾಡುತ್ತೇವೆ ವೀಡಿಯೋ ಮಾಡುತ್ತೇವೆ. ಲೋಕಕ್ಕೆ ಹಂಚುತ್ತೇವೆ.

ಪ್ರಬುದ್ಧತೆಯ ಅರಿವಿಲ್ಲದ ನ್ಯೂಸ್ ಚಾನೆಲ್ ಪರಂಪರೆ, ಲೈಕ್ ಶೇರ್ ಗಳ ಮೊತ್ತದಲ್ಲಿ ವೈರಲ್  ಎಂಬ ರೋಗ ಕೊಡುವ ಸುಖದ ಅಮಲಿನ ಪರಂಪರೆ ಜನರನ್ನು ಈ ವಿಡಿಯೋ ಮಾಡುವ ಮತ್ತು ಅದನ್ನು ಹಂಚಿಕೊಂಡು ಸುಖಿಸುವ ಹಂತಕ್ಕೆ ತಲುಪಿಸಿದೆ.

ಹಾಗೆ ನೋಡಿದರೆ, ಪರರ ಬದುಕಿನ ತಪ್ಪನ್ನು ಜಗತ್ತಿಗೆ ತೋರಿಸುವ ನಾವು ನಮ್ಮ ಬದುಕಿನಲ್ಲಿ ಒಂದೂ ತಪ್ಪು ಮಾಡದೆ ಇರುವ  ಸಾಧ್ಯತೆಯಾದರೂ ಇದ್ದೀತಾ.

ಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು…!

ಬದುಕಿನಲ್ಲಿ ತಪ್ಪೇ ಮಾಡದ ಮನುಷ್ಯನ ಮೈಯಿಂದ ಒಂದು ರೋಮ ತನ್ನಿ ಎಂದರೆ, ತಪ್ಪೇ ಮಾಡದ ತನುವಿನಿಂದ ಒಂದು ರೋಮ ಸಿಗುವುದಕ್ಕುಂಟಾ.

ತಪ್ಪೇ ಮಾಡದೆ ಇರುವವ ಇರುವುದಕ್ಕುಂಟಾ..?

ಇರುತ್ತಾನೆ ಎಂದಾದರೆ ಆತ ದೇವರಾಗುವುದಿಲ್ವಾ.

ಅಲ್ಲ ದೇವರ ಬದುಕಿನ ಕಥೆಗಳಲ್ಲಾ ತಪ್ಪುಗಳು ಕಾಣುವ ನಮಗೆ ದೇವರೇ ಕೆಲವು ಕಡೆ ತಪ್ಪು ಮಾಡಿದ್ದಾನೆ ಮತ್ತು ಆ ತಪ್ಪುಗಳನ್ನೇ ಒಪ್ಪಿಕೊಂಡವರಂತೆ ನಾವು.

ಇನ್ನು ತಪ್ಪು ಮಾಡಿದ ಮನುಷ್ಯರನ್ನು ಒಪ್ಪಿಕೊಳ್ಳುವ, ಪ್ರೀತಿಸುವ ಹೃದಯವಂತರಾಗಲಾದಷ್ಟು ಕ್ರೂರಿಗಳು ಯಾಕಗುತ್ತೇವೆ.

ಅಹಂಕಾರದ ಕಣ್ಣು ಕೊಡುವ ಶಕ್ತಿ ಅದು. ಅದನ್ನು ಮೊದಲು ಕಿತ್ತು ಬಿಡಬೇಕಾದ ದೃಷ್ಟಿಯೊಂದು ನಮಗೆ ಬೇಕಾಗಿದೆ.

ನಮ್ಮ ಶಿಷ್ಟ ಪರಂಪರೆಯಲ್ಲಿ , ನಮ್ಮ ಸಂವಿಧಾನದಲ್ಲಿ ಒಬ್ಬ ಆರೋಪಿಗೆ ಅಲ್ಲ ಅಪರಾಧಿಗಾದರೂ ಒಂದು ಶಿಕ್ಷೆಯನ್ನು ಕೊಡುವಾಗ ಒಂದು ಶಿಷ್ಟಾಚಾರವನ್ನು ಪಾಲನೆ ಮಾಡುತ್ತಾರೆ.

ಕತ್ತಲ ಕೋಣೆಯಲ್ಲಿ ಶಿಕ್ಷೆ ಅಥವಾ ಯಾರು ನೋಡದ ಜಾಗದಲ್ಲಿ ಶಿಕ್ಷೆ ಹೀಗೆ.



ಆದರೆ ದುಷ್ಟ ಪರಂಪರೆಯಲ್ಲಿ ರಾಕ್ಷಸ ವಿಧಾನದಲ್ಲಿ ಒಬ್ಬ ಅಪರಾಧಿಗೆ ಅಲ್ಲ ಆರೋಪಿಗಾದರೂ ಶಿಕ್ಷೆಯನ್ನು ಕೊಡುವಾಗ ಸಾರ್ವಜನಿಕವಾಗಿ , ಲೋಕಕ್ಕೆ ಕಾಣುವ ಹಾಗೆ ಕ್ರೂರವಾಗಿ ಶಿಕ್ಷೆಯನ್ನು ಕೊಡುವ ಪರಂಪರೆಯೂ ಇತ್ತು, ಮತ್ತು ಇದೆ ಕೂಡ.

ಮುಂಚೆ ರಾಕ್ಷಸರು ಅಂತ ಹೇಳುತ್ತಿದ್ದೆವು ಈಗ ಉಗ್ರರು ಅಂತ ಹೇಳುತ್ತೇವೆ. ಪದ ಮಾತ್ರ ಬದಲಾಗಿದೆ ಉಳಿದೆಲ್ಲವೂ ಅದೇ.

ಅದೇ ಮನಸ್ಥಿತಿಯವರು ನಾವು,

ಅಂಗೈಯಲ್ಲೊಂದು ಅಹಂಕಾರದ ಕಣ್ಣು ಇಟ್ಟುಕೊಂಡು ನಾವು ನೋಡಬಾರದ ಜಗತ್ತನ್ನು   ನಾವು ನೋಡಿದ ಜಗತ್ತನ್ನು, ನಾವು ನೋಡುವ ಜಗತ್ತಿಗೆ, ನಾವು ನೋಡದ ಜಗತ್ತಿಗೆ ತೋರಿಸ ಬಯಸುತ್ತೇವೆ.

ರಾಕ್ಷಸ ಪರಂಪರೆ, ಉಗ್ರ ಮನಸ್ಥಿತಿ ಪರಂಪರೆಯ ನಾವು ನಮ್ಮ ಅಂಗೈಯಲ್ಲಿರುವ ಅಹಂಕಾರದ ಕಣ್ಣಿನಿಂದ ವೀಡಿಯೋ ಮಾಡಿ ಹರಿಯಬಿಡುತ್ತೇವೆ. ಹರಿದು ಬಂದದ್ದನ್ನು ಹಂಚಿಕೊಂಡು ನಮ್ಮೊಳಗಿನ ರಾಕ್ಷಸನನ್ನು ಸಾಕುತ್ತಿರುತ್ತೇವೆ.


ಈ ರೀತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು ಮತ್ತು ಅದನ್ನು ಹಂಚಿಕೊಂಡು ಸುಖಿಸುವುದು ಕೂಡ ಒಂದು ಮನೋರೋಗ.
ಈ ಮನೋರೋಗಕ್ಕೆ ಹೆಸರು ಇನ್ನುಇಡಬೇಕಷ್ಟೆ


🍂📍🍂📍🍂📍🍂📍🍂

Sunday, September 1, 2019

🧭 ಸತ್ತ ಕಣ್ಣಿಂದ ಇಳಿವ ನೀರು 🧭

ಬಿಟ್ಟು ಹೋದ ಆ ಜೀವದ ನೆನಪು

ಈ ಜೀವ ಬಿಟ್ಟು ಹೋಗುವವರೆಗೂ ಜೀವಂತವಾಗಿರುತ್ತದೆ.

ಆ ಜೀವ ಹುಟ್ಟಿದ ದಿನ ನೆನಪಿಗೆ ಬರುತ್ತದೆ, ಸತ್ತೇ ಹೋದ ಈ ಜೀವಕ್ಕೆ.

ಸತ್ತ ಈ ಕಣ್ಣಿಂದ ಇಳಿವ ನೀರು
ಜೀವಂತಿಕೆಯ ಆ ಕಣ್ಣಿಗೆ ಕಾಣಲಾಗಷ್ಟು ನೀರನ್ನು ತುಂಬಿಸಿಯೇ ಸತ್ತದ್ದಲ್ಲಾ ಈ ಜೀವ.

ಸತ್ತು ಹೋದ ಜೀವದಿಂದ ಹೊರಟು ಹೋದ ಉಸಿರಿಗೊಂದು ಹುಟ್ಟು.

ಶ್ವಾಸಕೋಶದ ಗರ್ಭವನು ಬಿಟ್ಟು ಹೋದ ಉಸಿರು ಅದು.

ಅದು ಹುಟ್ಟಿತು

ಇದು ಸತ್ತಿತು‌.

ಬಿಟ್ಟು ಹೋದ ಆ ಜೀವದ ನೆನಪು

ಈ ಜೀವ ಬಿಟ್ಟು ಹೋಗುವವರೆಗೂ ಜೀವಂತವಾಗಿರುತ್ತದೆ.

ಕಿಟಕಿಯಾಚೆ ಕತ್ತಲ ಹೊತ್ತಿನ‌
ಹಳದಿ ಬಣ್ಣದ ಆಕಾಶದ ಮುಂದಿದ್ದ
ಗೋಡೆಯ ಮೇಲೆ ಸಮರಸೌ
ಮ್ಯಾವ್ ಎಂದಿತೊಂದು ಬೆಕ್ಕು.

ಜೀವಂತ ಇಲಿಯನು ಬಾಲದಲ್ಲಿ ಹಿಡಿದುಕೊಂಡು ಬಂದಳು ಹೆಂಡತಿ ವೈಜಯಂತಿ.

ಬೆಕ್ಕಿನ‌ ಆಹಾರ ಹೆಂಡತಿಯ‌ ಕೈಯ್ಯಲ್ಲಿತ್ತು...!

ಇಪ್ಪತ್ತನಾಲ್ಕು ವರುಷಗಳ ಹಿಂದೆ,
ಇಂದಿನ ದಿನ ಹುಟ್ಟಿದ ಹನಿಯೊಂದು
ಪುಣ್ಯ ನದಿಯಾಗಿ ಹರಿದು ಸಾಗುತ್ತಿದೆ.

ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

🎯 20/08/2019.

Sunday, June 9, 2019

🐣🦅🐣🦅🐣🦅🐣🦅

ಮೊಟ್ಟೆಗೆ ರೆಕ್ಕೆ ಬಂದಿತ್ತು


🐣🦅🐣🦅🐣🦅🐣🦅

ಸುಧಾಕರ ಜೈನ್ ಹೊಸಬೆಟ್ಟು ಗುತ್ತು


09/06/2019

ತಾನಿಟ್ಟ ಮೊಟ್ಟೆಗೆ ಹಕ್ಕಿಯೋರ್ವಳು ಕಾವುಕೊಡುತ್ತಿದ್ದಳು.

ಮರಗಳ ಗೆಲ್ಲುಗಳೆಡೆಯಲ್ಲಿ ನೀಲಿಯಾಕಾಶವನ್ನು ಹುಡುಕುತ್ತಾ ಕಾವುಕೊಡುತ್ತಿದ್ದಳು.

ತನ್ನ ತನುವಿಗೆ ಕಾವುಕೊಟ್ಟು  ಕಾವನ್ನೇರಿಸಿದ ತನ್ನಿನಿಯ ಹಾರಿಬರುವುದನ್ನು ಕಾಯುತ್ತಾ ಕಾಯುತ್ತಾ ಕಾವಾಗಿ‌ ಕಾವು ಕೊಡುತ್ತಿದ್ದಳು.


ಕಾದು ಕಾದು ಬರದಿರುವ ಇನಿಯನ ಬರಿದಾದ ದಾರಿಯಲಿ ಹಾರಿಹೋದಳು.


ಹೊರಬಂದ ಮೊಟ್ಟೆಯನ್ನು ಗೂಡಲ್ಲಿ ಬಿಟ್ಟು ಒಳಗಿರುವ ಮೊಟ್ಟೆಯನ್ನು ಹೊಟ್ಟೆಯೊಳಗೇ ಇಟ್ಟುಕೊಂಡು ‌ಹಾರಿಹೋದಳು.


ಬರಿದಾದ ದಾರಿಯಲಿ ಬರೆದೇ ಇರುವ ಇನಿಯನ ಹುಡುಕಿ ಹುಡುಕಿ ಬರಿದಾಗಿ ಹಾರಿಹೋದಳು.

ಗೂಡು ಸೇರುವ ಮುಂಚೆ ಗೂಡಿನ ಪಕ್ಕದಲ್ಲಿರುವ ಗೆಲ್ಲಮೇಲೊಮ್ಮೆ ಕುಳಿತು ಮತ್ತದೇ ಬರಿದಾದ ದಾರಿಯಲ್ಲಿ ತುಂಬಿ ಬರಬಹುದಾದ ಇನಿಯನಿಗಾಗಿ ಕಾಯುತ್ತ ಕತ್ತು ಹೊರಳಿಸಿದಳು.

ಹೊರಳಿದ ಕತ್ತಿಗೆ ಗೂಡು ಕಂಡಿತು


ಕಂಡಿತು ಗೂಡಲ್ಲಿ ಕಂಡಿತು, ತನ್ನ ಮೊಟ್ಟೆಗೆ ರೆಕ್ಕೆ ಬಂದಂಗೆ ಕಂಡಿತು...!



ತಾನಿಟ್ಟ ಮೊಟ್ಟೆಯಿಂದ ತನಗಿಂತಲೂ ದೊಡ್ಡದಾದ ರೆಕ್ಕೆ ಬರುವುದಕ್ಕುಂಟೇ ಎಂದು ಭಯದಿ ಬಡಿಯುತ್ತಿರುವ ಹೃದಯಕ್ಕೇ ತನ್ನ ರೆಕ್ಕೆಯನ್ನು ಬಡಿಯುತ್ತಾ ಗೂಡಿನ‌ ಬಳಿ ಹಾರಿದಳಾಕೆ.


ಗೂಡಲ್ಲಿದ್ದ ದೊಡ್ಡ ರೆಕ್ಕೆಯೊಂದು ಎರಡಾಗಿ ಕಂಡು‌ ಹಾರಿಹೋಯ್ತು.

ತನ್ನ ತನುವಿನಿಂದ ಕಾವು ಪಡೆದಿದ್ದ ಆ ಮೊಟ್ಟೆ ಒಡೆದು ಹೋಗಿತ್ತು.

ದೊಡ್ಡ ರೆಕ್ಕೆಯ‌ ಆ ಹಕ್ಕಿಯ ಕೊಕ್ಕಿನಲ್ಲಿ ತನ್ನ ಮೊಟ್ಟೆಯೊಳಗಿನ ಹಳದಿ ರಸವು ಅಂಟಿಕೊಂಡಿತ್ತು.


ತುಂಬಿಕೊಂಡಿದ್ದ ಮೊಟ್ಟೆ ಬರಿದಾಗಿ ಹೋಗಿತ್ತು.


ಬಸಿರೊಡುದುಕೊಂಡ ಬರಿದಾದ ಮೊಟ್ಟೆ ಅಂಗಾತವಾಗಿ ಮಲಗಿಕೊಂಡಿತ್ತು.


ಗೂಡಲ್ಲಿ ಕುಳಿತು ಉಸಿರಾಡಿದಾಗ ಒಳ ಹೋಗುವ ಉಸಿರಲ್ಲೆಲ್ಲಾ ದೊಡ್ಡರೆಕ್ಕೆಯ ಹಕ್ಕಿಯ ವಾಸನೆಯೇ ಒಳ ಹೋಗಿ ಕರುಳಿಗೇ ಕುಕ್ಕುತ್ತಿತ್ತು.


ಕುಕ್ಕತ್ತಿತ್ತು ಕುಕ್ಕುತ್ತಿತ್ತು ಕುಕ್ಕುತ್ತಲೇ ಇತ್ತು
ತಾನು ತನ್ನಿನಿಯನ‌ ಜೊತೆಯಾಗಿ ಕಟ್ಟಿದ ಗೂಡು ಹರಿದು ಹರಿದು ಹೋಗುವವರೆಗೂ ಕುಕ್ಕುತ್ತಲೇ ಇತ್ತು.

ಗೂಡೆಲ್ಲಾ ಹರಿದ ಹೋದ ಮೇಲೆ ಅದೇ ಗೆಲ್ಲಿನ ಮೇಲೆ ಕುಳಿತು ತನ್ನ ಗರ್ಭದಲ್ಲಿದ್ದ ಕೊನೆಯ ಮೊಟ್ಟೆಯನ್ನು ಕೊನೆಯಾಗಿಸಿತು.

ಕೆಳಗೆ ಬಿದ್ದು ಒಡೆದು ಹೋದ ಬಿಳಿ ಮೊಟ್ಟೆಯ ತುಂಬೆಲ್ಲಾ ಕಪ್ಪಿರುವೆ ತುಂಬಿಕೊಂಡಿತು.


ಮೊಟ್ಟೆಯ ಪಸೆಯೆಲ್ಲಾ ಬರಿದಾದ ಮೇಲೆ ಸಾಗಿತು ಇರುವೆ ಸಾಲು ಪಕ್ಕದಲ್ಲಿ ಬಿದ್ದಿದ್ದ ಕಾವು ಆರಿ ಹೋದ ಹಕ್ಕಿಯನ್ನು ತಿನ್ನಲೆಂದು.


🧵 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

        09/06/2019

Friday, September 28, 2018

🏮🚦🏮🚦🏮🚦🏮🚦🏮

💈ಆ ಶೇಣಿ ಮತ್ತು ಈ ಮಾಣಿ💈

 🏮🚦🏮🚦🏮🚦🏮🚦🏮

ಶೇಣಿ ಮತ್ತು ಮಾಣಿ ಎರಡರಲ್ಲೂ ಸಮ ತೂಕದ ಮಾತ್ರೆ ಇದೆ….!



17/09/2017.

ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

ಯಕ್ಷ ಚೈತನ್ಯ , (ರಿ) ಅಶ್ವತ್ಥಪುರ ಇದರ 13ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಾಳಮದ್ದಳೆ ಮತ್ತು ಶೇಣಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ನಾನು ಮಾಡಿದ 19 ನಿಮಿಷದ ಶೇಣಿ ಸಂಸ್ಮರಣ ನುಡಿಯ ಅಕ್ಷರ ರೂಪ.

20 ನಿಮಿಷ ಕಾಲಾವಕಾಶ ಅಂತ ಮೊದಲೇ ಹೇಳಿದ್ದರು. ಹಾಗಾಗಿ ನಾನು 19 ನಿಮಿಷಕ್ಕೆ ತಯಾರಿಮಾಡಿಕೊಂಡಿದ್ದೆ. ಹತ್ತೊಂಬತ್ತಕ್ಕೆ ಮುಗಿಸಿದೆ.

ಈ ಪುಣ್ಯದ ಅವಕಾಶವನ್ನು ಮಾಡಿಕೊಟ್ಟ,

🚦ಸದಾಶಿವ ರಾವ್ ನೆಲ್ಲಿಮಾರ್ ಇವರಿಗೆ ಪ್ರೀತಿಯ ನಮಸ್ಕಾರಗಳು.

ಸಂಸ್ಮರಣಾ ಭಾಷಣದ ನಡುವೆ ಶೇಣಿಯವರ ಮಾತನ್ನು ಶೇಣಿವರ ಸ್ವರದಲ್ಲೇ ಕೇಳಿಸಿದ ಸುಲಭ ಮತ್ತು ವಿಶೇಷ ತಂತ್ರಜ್ಞಾನ ಬಳಸಿಕೊಂಡದ್ದರ ಬಗ್ಗೆ ವಿವರ. ಇದರ ಜೊತೆಗೆ ಆಡಿಯೋ ಫೈಲ್ ಕೂಡ ಇದೆ.

 ಈ ತಂತ್ರಜ್ಞಾನವನನ್ನು ತಿಳಿದುಕೊಂಡ ಆಸಕ್ತರು ಇದರಪ್ಪನದ್ದು ಮಾಡಬಹುದೆಂಬ ಆಸೆಯಿಂದ,

 ಈಗ ಮೊದಲಿಗೆ ಅದರ ಮೇಕಿಂಗ್ ಕಥೆ.


ಶೇಣಿಯವರು ಆನಾರೋಗ್ಯಕ್ಕೆ ಒಳಗಾಗಿ ಕಣ್ಣು ದೃಷ್ಟಿಯನ್ನು ಕಳೆದುಕೊಂಡಾಗ ಕಾಣದ ಪ್ರೇಕ್ಷರನ್ನು ನೋಡದೆ ತನಗೆ ಅರ್ಥ ಹೇಳುವುದಕ್ಕೆ ಆಗುವುದಿಲ್ಲ ಎಂದು ಕುಳಿತರಂತೆ.


ಆದರೆ ನಾನು ಅವರ ಅಷ್ಟೂ ಅರ್ಥವನ್ನು ಅವರನ್ನು ನೋಡದೇ ಕೇಳಿದವನು.

ಅವರ ಬಗ್ಗೆ ಮಾತಾಡುವಾಗ, ನನ್ನ ಮಾತನ್ನು ಕೇಳುವ ಜನರೆಂದರೆ ಅದು ಶೇಣಿಯವರ ಪ್ರೇಕ್ಷರೇ ಆಗಿರುತ್ತಾರೆ ಎಂಬ ಧೈರ್ಯ ಮತ್ತು ನಂಬಿಕೆ ಇತ್ತು. ಹಾಗಾಗಿ ನಾನು ಅವರ ಬಗ್ಗೆ ಮಾತಾಡುವಾಗ ನನ್ನ ಮಾತನ್ನು ಕೇಳುವ ಜನ ಅವರ ಮಾತನ್ನೂ ಕೇಳುವಂತಾಗಬೇಕು ಎಂದು ಆಸೆ ಹುಟ್ಟಿತು.


ಮನುಷ್ಯನಿಗೆ ಮೊತ್ತ ಮೊದಲಾಗಿ ಇಮ್ಯಾಜಿನೇಷನ್ ಹುಟ್ಟುತ್ತದೆ. ಆ ಇಮ್ಯಾಜಿನೇಷನ್ ನನ್ನೇ ಸತ್ಯವಾಗಿಸಲು ಹೋಗುವವನು ವಿಜ್ಞಾನದ ದಾರಿ ಹಿಡಿಯುತ್ತಾನೆ. ಇಮ್ಯಾಜಿನೇಷನನ್ನು ಸತ್ಯದ ಹತ್ತಿರಕ್ಕೆ ತರುವವನು ಕಲಾವಿದನಾಗುತ್ತಾನೆ.



ಒಟ್ಟಿನಲ್ಲಿ ಇಮ್ಯಾಜಿನೇಷನ್ ಈಸ್ ವೆರಿ ಇಂಪಾರ್ಟೆಂಟ್.



ಶೇಣಿಯವರ ಹಾಗೆ ಹೇಳಿದ್ದರು ಹೀಗೆ ಹೇಳಿದ್ದರು ಎಂದು ವಿವರಿಸುವ ಕಲೆಯ ದಾರಿಯ ಜೊತೆಗೆ ಹೀಗೆ ಮಾತಾಡಿದ್ದಾರೆ ಎಂದು ಸತ್ಯವನ್ನೇ ತೋರಿಸುವಲ್ಲಿ ವಿಜ್ಞಾನದ ದಾರಿ ಹಿಡಿದೆ.



·         ನನಗೆ ಇಷ್ಟ ಆಗಿದ್ದ ಒಂದಷ್ಟು ಶೇಣಿಯವರ ಮಾತುಗಳನ್ನು ತಾಳಮದ್ದಳೆಯಿಂದ ಅಡೋಸಿಟಿ ಸಾಫ್ಟ್ ವೇರ್ ಬಳಸಿ ಕತ್ತರಿಸಿಕೊಂಡೆ.

·         ಕತ್ತರಿಸಿಕೊಂಡ ಆಡಿಯೋ ತುಣುಕನ್ನು ಹೈಸೈಝ್ MP3 ಗೆ ಕನ್ವರ್ಟ್ ಮಾಡಿಕೊಂಡೆ.

·         ಆ ಆಡಿಯೋ ಪೀಸ್ ಗಳಿಗೆ ನಂಬರ್ ಮತ್ತು ಫೈಲ್ ನೇಮ್ ಕೊಟ್ಟು ಮೊಬೈಲಿಗೆ ಹಾಕಿಕೊಂಡೆ.

·         ನನ್ನಲ್ಲಿರುವ ಬ್ಲೂಟೂತನ್ನು ಡೈರೆಕ್ಟಾಗಿ ಆಂಪ್ಲಿಪ್ಲೇಯರ್ ಲೈನ್ ಇನ್ ಕನೆಕ್ಷನ್ ಮಾಡಿದೆ.

·         ಮೊಬೈಲಿನಲ್ಲಿ ಸೇವ್ ಮಾಡಿಕೊಂಡಿದ್ದ ಆಡಿಯೋ ಫೈಲ್ ಹುಡುಕುವುದಕ್ಕೆ ಕಿರಿಕಿರಿ ಆಗದಂತೆ ಹೋಮ್ ಸ್ಕ್ರೀನ್ ಗೆ ಶಿಫ್ಟ್ ಮಾಡಿದೆ.

·         ವೇದಿಕೆಯಲ್ಲಿ ನಿಂತುಕೊಂಡು ಮಾತಾಡುತ್ತಾ ಮೊಬೈಲಿನಲ್ಲಿ ಪ್ಲೇ ಮಾಡಿದ್ರೆ ಡೈರೆಕ್ಟಾಗಿ ಸಭೆಯ ಎಲ್ಲಾ ಸ್ಪೀಕರ್ ಗಳಲ್ಲಿ ಕೇಳುವ ಹಾಗೆ ಮಾಡಿಕೊಂಡೆ.

·         ಸೌಂಡ್ ಕಂಟ್ರೋಲ್ ಕೂಡ ನಿಂತಲ್ಲಿಂದಲೇ ಆಗುವಂತೆ ಮೊಬೈಲಿನಿಂದಲೇ ವ್ಯವಸ್ಥೆ ಮಾಡಿಕೊಂಡೆ.

·         ಭಾಷಣ ಮಾಡುತ್ತಾ ಮಾಡುತ್ತಾ ಸಂದರ್ಭಕ್ಕೆ ಸರಿಯಾಗಿ ಮೊಬೈಲ್ ಹಿಡಿದು ಕೊಂಡು ಪ್ಲೇ ಮಾಡಿದೆ.

·         ಶೇಣಿಯವರು ಮಾತಾಡಿದರು.





ಇಲ್ಲಿಂದ ಸಂಸ್ಮರಣಾ ನುಡಿ



ನಮ್ಮಲ್ಲಿ ಎರಡು ಪರಂಪರೆ ಇದೆ.

ಒಂದು ದೇವರೇ ಮನುಷ್ಯನಾಗಿ ಭೂಲೋಕಕ್ಕೆ ಇಳಿದು ಬರುವುದು, ನಾಯಕನಾಗಿ, ನಾಯಕನೇ ದೇವರಾಗಿ ಬದುಕಿ ತೋರಿಸುವುದು.



ಇನ್ನೊಂದು ಮನುಷ್ಯನೇ ನಾಯಕನಾಗುತ್ತಾ ಆ ನಾಯಕನೇ ದೇವರಾಗುತ್ತಾ ಬದುಕಿ ತೋರಿಸುವುದು.



ಆತ ತೋರಿಸಿದ ದಾರಿಯಲ್ಲಿ ಭಕ್ತ ನಡೆದು ಸಾಗುವುದು.



ಶೇಣಿಯವರು ನಾಯಕನಾಗಿ, ನಾಯಕನೇ ದೇವರಾಗಿ ದಾರಿ ಮಾಡಿಕೊಂಡು ನಡೆದು ಬದುಕಿ ತೋರಿಸಿದರು.



ಶೇಣಿಯವರ ಬಗ್ಗೆ ಸಂಸ್ಮರಣಾ ನುಡಿ ಮಾಡ್ತೀರಾ ಎಂದು ಕೇಳಿದಾಗ..? ಒಂದು ಕ್ಷಣ ನನಗಾ ಯೋಗ್ಯತೆ ಇದೆಯಾ…..! ಈ ಯೋಗ್ಯತೆ ಇದೆಯಾ ಎಂಬ ಪ್ರಶ್ನೆಯ ಹುಟ್ಟೇ ಇಲ್ಲದ ಯೋಗ್ಯತೆಯನ್ನು ತೋರಿಸಿದ ಯೋಗ್ಯತೆಯ ಕ್ಷಣ ಅದು.



ಇಲ್ಲಿಯವರೆಗೆ ಶೇಣಿ ಸಂಸ್ಮರಣೆ ಮಾಡಿದವರೆಲ್ಲಾ ಅವರನ್ನು ನೋಡಿದವರು. ಅವರೊಡನೆ ಒಡನಾಟ ಇದ್ದವರು. ಆದರೆ ನಾನು ಶೇಣಿಯವರನ್ನು ನೋಡದೇ ಇರುವವನು. ಹೇಗೆ ಸಾಧ್ಯ… ಹೇಗೆ ಸಾಧ್ಯ..? ಎಂದು ಹುಟ್ಟಿದ ಪ್ರಶ್ನೆಗೆ ಸಿಕ್ಕ ಉತ್ತರ ಸಾಧ್ಯ ಇದೆ.

ಬದುಕಿನಲ್ಲಿ ತಾನು ನೋಡದೇ ಇರುವ ಪಾತ್ರವನ್ನು ಮಾಡಿ ತಾನೊಂದು ಕ್ಷಣ ದೇವರಂತಾಗುವ ಕಲೆ ನಮ್ಮದು, ಯಕ್ಷಗಾನ. ಶೇಣಿಯವರನ್ನು ನೋಡದೇ ಇರುವ, ಆದರೆ ಮುಚ್ಚಿದ ಕಣ್ಣೊಳಗೂ ಅವರನ್ನು ಕಂಡಿರುವಂತಹ ನಾನು ಅವರ ಬಗ್ಗೆ ಭಕ್ತಿಯಿಂದ ಒಂದೆರಡು ತೊದಲು ನುಡಿಯನ್ನಾಡುವುದಕ್ಕೇನಾಗಬೇಕು ಎಂದು ಧೈರ್ಯದಿಂದಲೇ ಒಪ್ಪಿಕೊಂಡೆ.

ಶೇಣಿಯವರಿರುವ ಒಂದಷ್ಟು ತಾಳಮದ್ದಳೆಯನ್ನು ಕೇಳಿದ್ದೇನೆ.ಮತ್ತೆ ಅದರ ಬಗ್ಗೆ ಒಂದಷ್ಟು ಬರೆದಿದ್ದೇನೆ ಎನ್ನುವುದಷ್ಟೇ ನನಗಿರುವ ಯೋಗ್ಯತೆ.



ಅದೊಂದು ಎಲಿಮೆಂಟರಿ ಶಾಲೆ. ಆ ಶಾಲೆಯ ಒಂದು ಪಕ್ಕಾಸಿಗೆ ನೇತು ಹಾಕಿರುವ ಗಂಟೆ. ಆಗಂಟೆಗೆ ಸಿಕ್ಕಿಸಿರುವ ಒಂದು ಕೋಲು. ಆ ಗಂಟೆಯ ಶಬ್ಧ ಕೇಳುತ್ತಿದ್ದಂತೆ ಮೈದಾನದಲ್ಲಿಆಡುತ್ತಿದ್ದ ಮಕ್ಕಳೆಲ್ಲರೂ ತರಗತಿಯ ಒಳಗೆ ಕುಳಿತುಕೊಳ್ಳುತ್ತಾರೆ.  ನೆಲದ ಮೇಲೆ ಕುಳಿತರೆ,ಬರೆಯುವುದಕ್ಕೆ ಬೆಂಚ್ಚೇ ಡೆಸ್ಕ್ ಆಗುತ್ತದೆ. ಓದುವುದಕ್ಕೆ ಕುಳಿತರೆ ಆ ಡೆಸ್ಕೇ ಬೆಂಚಾಗುತ್ತದೆ. ಅಲ್ಲೊಬ್ಬ ಹುಡುಗ. ನಾಲ್ಕನೇ ಕ್ಲಾಸಿನ ಆ ಹುಡುಗ ಎರಡು ಗೆರಗಳ ಮಧ್ಯೆ ಬರೆದಕನ್ನಡಾಕ್ಷರಗಳ ಚಂದವನ್ನು ಮೆಚ್ಚಿಕೊಂಡ ಆ ಶಾಲೆಯ ಮುಖ್ಯೋಪಧ್ಯಾಯರಾದ ಫಕೀರಬಂಗೇರ ಎಂಬ ಮೇಷ್ಟ್ರು, ನಾಳೆಯಿಂದ ನೀನು ಗೆರೆಗಳೇ ಇಲ್ಲದ ಪುಸ್ತಕದಲ್ಲಿಓರೆಕೋರೆಯಾಗದಂತೆ ಕಾಪಿ ಬರೆದುಕೊಂಡು ಬರಬೇಕು, ಎಂದು ಹೇಳುತ್ತಾರೆ.



ಆದರೆ ಆ ಗೆರೆಗಳಿಲ್ಲದ ಪುಸ್ತಕದಲ್ಲಿ ಬರೆಯ ಬೇಕಾದ ಅಕ್ಷರಗಳು ನಿನ್ನ ಪಾಠ ಪುಸ್ತಕದಲ್ಲಿಇರುವವು ಬೇಡ. ನಾನು ನಿನಗೊಂದು  ಬೇರೆ ಪುಸ್ತಕ ಕೊಡುತ್ತೇನೆ ಎಂದು ಒಂದುಹಸ್ತಾಕ್ಷರಗಳಿರುವ


ಪುಸ್ತಕವನ್ನು ಕೊಡುತ್ತಾರೆ. ಹುಡುಗ ಗೆರೆಗಳೇ ಇಲ್ಲದ ಪುಸ್ತಕದಲ್ಲಿಬರೆಯಲು ಆರಂಭಿಸುತ್ತಾನೆ. ನಾಲ್ಕನೇ ಕ್ಲಾಸಿನ ಆ ಹುಡುಗ ಬರೆಯುತ್ತಾ ಬರೆಯುತ್ತಾ ತಾನುಬರೆತ್ತಿರುವ ಆ ಅಕ್ಷರಗಳನ್ನು ಒಟ್ಟಾಗಿಸಿಕೊಂಡು ಪದಗಳಾಗಿ, ಪದಗಳನ್ನು ಪದವಾಗಿಹಾಡುತ್ತಾ ಬರೆಯಲಾರಂಭಿಸುತ್ತಾನೆ.



ಗುರುಗಳಾದ ಫಕೀರ ಬಂಗೇರರು ಕೊಟ್ಟ ಆ ಹಸ್ತಾಕ್ಷರದ ಪುಸ್ತಕ, ‘ಅಂಶುಮತಿ ಕಲ್ಯಾಣ’ ಎಂಬಪ್ರಸಂಗ ಪುಸ್ತಕ.

ನಾಲ್ಕನೇ ಕ್ಲಾಸಿನಲ್ಲೇ ಗೆರೆಗಳಿಲ್ಲದ ಪುಸ್ತಕದಲ್ಲಿ ಯಕ್ಷಗಾನದ ಪದ್ಯವನ್ನು ಹಾಡುತ್ತಾಬರೆಯುತ್ತಿದ್ದ ಆ ಬಾಲಕ, ಶೇಣಿ ಗೋಪಾಲ ಕೃಷ್ಣ ಭಟ್.



ಶೇಣಿ ಗೋಪಲ ಕೃಷ್ಣ ಭಟ್ ಇವರು ತನ್ನ ಬದುಕಿನಲ್ಲಿ ಗೆರೆಗಳೇ ಇಲ್ಲದ ಪುಸ್ತಕದಲ್ಲಿ ಬರೆದಿಟ್ಟುಹೋಗಿದ್ದಾರೆ. ಆ ಬರೆದ ಅಕ್ಷರಗಳೇ ಗೆರೆಗಳಾಗಿ ಹೋಗಿದೆ. ಆ ಅಕ್ಷರದ ಗೆರೆಗಳೇ ನಮಗಿಂದೂಮಾರ್ಗವಾಗಿ ಉಳಿದಿದೆ.

ಈ ಮಾರ್ಗದ ಉದ್ದ ಅಗಲದ ಅರಿವೇ ಇಲ್ಲದೆ ಅದೇ ಮಾರ್ಗದಲ್ಲಿ ನಡೆದು ಸಾಗುವ ಈ ಮರಿಮೊಮ್ಮಗನಿಗೆ ಆ ಹೆಜ್ಜೆಯ ಆಕಾರವೇ ಒಂದು ಚಿತ್ರವಾಗಿ, ಕಾವ್ಯವಾಗಿ ಕಂಡಾಗಲೇ ಈ ಪಾದದದಿಕ್ಕನ್ನೇ ಹಿಡಿದು ಸಾಗುವ ಧೈರ್ಯ ಬಂದದ್ದು.



ಹ್ಹುಂ…., ಭಲ್ಲುಕನ ಪದಚಿಹ್ನೆಯನ್ನು ಹಿಡಿದು ಸಾಗಿದ ಕೃಷ್ಣನಿಗೆ ಮಣಿ ಸಿಕ್ಕಿತು.

ಶೇಣಿಯವರ ಪದ ಚಿಹ್ನೆಯನ್ನು ಹಿಡಿದು ಭಕ್ತಿಯಿಂದ ಸಾಗಿದವರಿಗೆಲ್ಲಾ ಒಂದು ಅರ್ಥದಮಾಣಿಕ್ಯವೇ ಸಿಕ್ಕಿದೆ. ಸಿಗುತ್ತಲೇ ಇದೆ.



ನಾನು ನನ್ನ ಬದುಕಿನ ಡಿಗ್ರಿ ವಿದ್ಯಾಭ್ಯಾಸದ ಪ್ರಾಯದವರೆಗೆ ಈ ಶೇಣಿ ಗೋಪಾಲ ಕೃಷ್ಣ ಭಟ್ಎಂಬ ಹೆಸರನ್ನು ಕೇಳಿದವನೇ ಅಲ್ಲ. ನಾನು ಆಳ್ವಾಸ್ ಕಾಲೇಜಿನಲ್ಲಿ ಫಸ್ಟ್ ಇಯರ್ ಡಿಗ್ರಿಓದುತ್ತಿದ್ದಾಗ ನಮ್ಮ ಕಾಲೇಜಿನಲ್ಲಿ ಯಾವುದೋ ಒಂದು ದೊಡ್ಡ ಕಾರ್ಯಕ್ರಮ ನಡೆಯುತ್ತಿತ್ತು. ಅದು ಜೂಲೈ18 2006ರಂದು ನಮ್ಮ ಡಾ|| ಬಿ. ನಿತ್ಯಾನಂದ ಶೆಟ್ಟಿಯವರು ನೇರವಾಗಿ ಮೈಕ್ನ ಹತ್ತಿರ ಬಂದವರೇ ಇದೊಂದು ಪ್ರಕಟಣೆ. ಯಕ್ಷಗಾನ ಕ್ಷೇತ್ರದ ಭೀಷ್ಮನೆಂದೇ ಖ್ಯಾತಿಯನ್ನುಹೊಂದಿದ್ದ ಡಾ|| ಶೇಣಿ ಗೋಪಾಲ ಕೃಷ್ಣ ಭಟ್ ಇವರು ನಮ್ಮನ್ನು ಅಗಲಿದ್ದಾರೆ. ಒಂದು ಕ್ಷಣಎಲ್ಲರೂ ಎದ್ದು ನಿಂತು ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಬೇಕು ಅಂತ ಹೇಳಿದಾಗಲೇನಾನು ಶೇಣಿಯವರ ಹೆಸರನ್ನು ಮೊದಲ ಬಾರಿಗೆ ಕೇಳಿದ್ದು.



ಶೇಣಿಯವರು ಇಲ್ಲದ ಲೋಕದಲ್ಲಿ ಕಣ್ಣು ಮುಚ್ಚಿಕೊಂಡು ಮೌನ ಪ್ರಾರ್ಥನೆ ಮಾಡುತ್ತಿದ್ದ  ನನಗೆ ನನ್ನೊಳಗಿನ ಬೊಬ್ಬೆಯೊಂದು ಕೇಳಲಾರಂಭಿಸಿದ್ದು. ಒಬ್ಬ ಸಾಧಕನಾದ ಮನುಷ್ಯನಸಾವಿನಿಂದಲೇ ನಿನಗವನ ಪರಿಚಯವಾಗುತ್ತದೆ ಅಂದರೆ ಆ ಕ್ಷಣದವರೆಗೆ ನೀನು ಸತ್ತೇ ಇದ್ದಿ… ಹುಟ್ಟು, ಈಗಲಾದರೂ ಹುಟ್ಟು….!  ಇಷ್ಟು ದೊಡ್ಡ ಕಾರ್ಯಕ್ರಮದ ಗದ್ದಲವನ್ನೇ ವಶಪಡಿಸಿಕೊಂಡು ಒಂದು ಕ್ಷಣ ಮೌನ ಸ್ಥಾಪನೆ ಮಾಡುವ ಶಕ್ತಿಯನ್ನು ಹೊಂದಿರುವ ಆ ಶಕ್ತಿಯಾರಿರಬಹುದೆಂದು ಹುಡುಕು, ಹೋಗು. ಎಂದು ನನ್ನ ಮೂಕ  ಮನಸ್ಸು ಬೊಬ್ಬಿಡುತ್ತಿತ್ತು.



ಒಂದು ಹೂವು ಮೊಗ್ಗಾಗಿದ್ದಾಗ ನೋಡುವ ಭಾಗ್ಯ ನನಗಿರಲಿಲ್ಲ. ಅರಳಿದಾಗ ಕಾಣುವ ಕಣ್ಣು ತೆರೆಯಲಿಲ್ಲ…. ಅದೆಲ್ಲೋ, ಅದೆಷ್ಟೋ ಎತ್ತರದಲ್ಲಿ ಅರಿಳಿದ ಅದರ ಪರಿಮಳ ಊರ ತಂಬಾತುಂಬಿದ್ದರೂ ಆ ಪರಿಮಳವನ್ನು ಗೃಹಿಸಿ ಹೀರುವ ನನ್ನ ಮೂಗು ಅರಳಲೇ ಇಲ್ಲ. ಕಣ್ಣು ಮುಚ್ಚಿಕೊಂಡು ಅವರಿಗೊಂದು ಮೌನ ಪ್ರಾರ್ಥನೆ ಸಲ್ಲಿಸಿದ ಮೇಲೆ, ಕಣ್ಣು ತೆರೆದು, ಮೂಗರಳಿಸಿಕೊಂಡು ಆ ಕಸ್ತೂರಿ ಮೃಗದ ಹೆಜ್ಜೆಯನ್ನು ಹುಡುಕಿಕೊಂಡು ಸಾಗಲಾರಂಭಿಸಿದೆ.



“ಯಕ್ಷಗಾನ ಕ್ಷೇತ್ರದ ಭೀಷ್ಮ ಡಾ|| ಶೇಣಿ ಗೋಪಾಲ ಕೃಷ್ಣ ಭಟ್” ಎಂದು ಅವರು ಹೇಳಿದ್ದನ್ನು ನಿನಪಿಟ್ಟು ಕೊಂಡೆ.





ಕ್ಯಾಸೆಟ್ ಅಂಗಡಿಗೆ ಹೋದೆ. ಮೊತ್ತ ಮೊದಲ ಬಾರಿಗೆ ಡಾ|| ಶೇಣಿ ಗೋಪಾಲ್ ಕೃಷ್ಣ ಭಟ್ ಎಂಬ ಹೆಸರನ್ನು ಉಚ್ಛಾರ ಮಾಡಿ ಹೇಳಿದೆ. ಇವರು ಇರುವ ತಾಳಮದ್ದಳೆ ಕೊಡಿ ಅಂದೆ.



ಮಾಗಧ ವಧೆ ಕೊಟ್ಟರು. ನನಗೆ ಅದರಲ್ಲಿ ಶೇಣಿಯವರು ಇದ್ದಾರು ಎಂಬ ಧೈರ್ಯ ಇರಲಿಲ್ಲ.ಕ್ಯಾಸೆಟ್ ಕವರಲ್ಲಿ ಅವರ ಹೆಸರನ್ನು ಹುಡುಕಿದೆ… ಮೊತ್ತ ಮೊದಲ ಬಾರಿಗೆ ಡಾ|| ಶೇಣಿ ಗೋಪಾಲ್ ಕೃಷ್ಣ ಭಟ್ ಎಂಬ ಹೆಸರನ್ನು ಓದಿದೆ.

ಅದೇ ಕ್ಯಾಸೆಟ್ಟಿನಲ್ಲಿರುವ ಒಂದು ಅಜ್ಜನ ಫೋಟೋ ನೋಡಿದೆ. ಆ ಫೋಟೋದ ಮೇಲೆ ಬೆರಳನ್ನಿಟ್ಟು ಇದು ಯಾರು ಎಂದು ಅಂಗಡಿಯವರಿಗೆ ಕೇಳಿದೆ.



ಅಂಗಡಿಯವರು ಉಚ್ಛರಿಸಿದರು ಡಾ|| ಶೇಣಿ ಗೋಪಾಲ್ ಕೃಷ್ಣ ಭಟ್.



ಕಿಸೆಯಲ್ಲಿದ್ದ ದುಡ್ಡನ್ನು ಅಂಗಡಿಯವರಿಗೆ ಕೊಟ್ಟೆ. ಅಂಗಡಿಯಲ್ಲಿದ್ದ ಶೇಣಿಯವರನ್ನು ನನ್ನ ಹೃದಯಕ್ಕೆ ಹತ್ತಿರದಲ್ಲೇ ಇದ್ದ ಕಿಸೆಯಲ್ಲಿ ಇಟ್ಟುಕೊಂಡು ಸೀದ ಮನೆಗೆ ಬಂದೆ.



ಅಲ್ಲಿಂದ ಆರಂಭ ಆಯ್ತು ಶೇಣಿಯವರ ಹೆಜ್ಜೆಯ ಮೇಲಿನ ನನ್ನ ಪ್ರಯಾಣ.

ಅವರಿಟ್ಟ ಒಂದು ಹೆಜ್ಜೆಯೇ ಮೇಲೆ ನಡೆಯಲು ಆರಂಭಿಸಿದರೂ ಅದೊಂದು ಬುಹು ದೂರದ ವರೆಗಿನ ದಾರಿಯಾಗಿ ಕಾಣುತ್ತದೆ. ಅಷ್ಟು ದೊಡ್ಡ ಹೆಜ್ಜೆ ಅದು.





ಶೇಣಿಯವರ ಒಂದು ತಾಳಮದ್ದಳೆಯ ಅರ್ಥವನ್ನು ಒಮ್ಮೆ ಕೇಳಿ ಮುಗಿಸುವಾಗ ಒಂದು ಪುಸ್ತಕವನ್ನು ಓದಿ ಮುಗಿಸಿದ ಅನುಭವ ಸಿಗುತ್ತದೆ. ಅದೇ ತಾಳಮದ್ದಳೆಯನ್ನು ಇನ್ನೊಮ್ಮೆ ಕೇಳಿದರೆ ಅದು ಮುಗಿಯುವಾಗ ಬೇರೆಯೇ ಒಂದು ಪುಸ್ತಕವನ್ನು ಓದಿ ಮುಗಿಸಿದ ಹಾಗಾಗುತ್ತದೆ.





ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳು ಈಗ ಒಂದು ಮಾತು ಹೇಳಿದರು. ಶೇಣಿಯವರು ನಮ್ಮೊಡನೇ ಇದ್ದಾರೆ ಅವರು ಇಲ್ಲಿಗೆ ಇವತ್ತು ಬಂದೇ ಬಂದಿರುತ್ತಾರೆ.



ನಾನು ಇಲ್ಲಿ ಬಂದು ನಿಂತು ಮಾತಾಡಲು ಕಾರಣ ಆ ಶೇಣಿಯವರು.



ನಾನು ಮಾತಾಡಲು ಕಾರಣವಾದ ಆ ಶೇಣಿಯವರನ್ನೊಮ್ಮೆ, ಇಲ್ಲೇ ಇರುವ ಆ ಶೇಣಿಯವರನ್ನೊಮ್ಮೆ ಈಗ ಮಾತಾಡಿಸುವಾ…!



-ಗಂಗಾಶಾಪ ಎಂಬ ಪ್ರಸಂಗದಲ್ಲಿ ಶಂತನು ಚಕ್ರವರ್ತಿಯಾಗಿ ಮಾತಾಡುತ್ತಾ ಒಂದು ಮಾತುಹೇಳುತ್ತಾರೆ…..





ಪ್ಲೇ……

ನಾನು ಹೇಳಿದ ವಾಕ್ಯ ಕೊನೆಯಾಗುತ್ತಿದ್ದಂತೆ ಶೇಣಿಯವರ ಮಾತು……!



“ದೇವಲೋಕದಲ್ಲಿ ಇಂದ್ರ ಇಲ್ಲಾಂತಾಗುವಾಗ ಇಂದ್ರನಾಗುವುದಕ್ಕೆ ನಮ್ಮ ವಂಶದವರೇ ಬೇಕು. ಹಾಗಂತ ಊರಿನಲ್ಲಿ ಮಾಡಬಾರದ ಮಾಡಲಾಗದ ಅನ್ಯಾಯವನ್ನು ಮಾಡಿದವರು ಎಲ್ಲಿದ್ದಾರೆ ಎಂದರೆ ಅದು ನಮ್ಮ ಚಂದ್ರವಂಶದಲ್ಲೇ ಇದ್ದಾರೆ.”



ಇದು ತಾನು ಆ ಕ್ಷಣದಲ್ಲಿ ಶಂತನುವೇ ಆಗಿದ್ದರೂ ಕೂಡ ತನ್ನ ವಂಶದ ಸಾಮರ್ಥ್ಯದ ಬಗ್ಗೆ ಇರುವ ಅಭಿಮಾನ ಮತ್ತು ತನ್ನ ವಂಶದಿಂದಾದ ಅನ್ಯಾಯದ ಬಗ್ಗೆ ಇರುವ ದುರಾಭಿಮಾನವನ್ನು ಪ್ರಕಟಿಸುವಲ್ಲಿ ಶೇಣಿಯವರು ತನ್ನ ಪಾತ್ರಕ್ಕಷ್ಟೇ ನ್ಯಾಯ ಕೊಡುವ ನ್ಯಾಯವಾದಿ ಅನ್ನುವುದಕ್ಕಿಂತಲೂ, ನಿಜವಾದ ನ್ಯಾಯಕ್ಕೆ ನ್ಯಾಯವನ್ನು ಕೊಡುವ ನ್ಯಾಯ ಮೂರ್ತಿಗಳ ಹಾಗೆ ಕಾಣುತ್ತಾರೆ.



ಅಲ್ಲಿಂದ ಮುಂದಕ್ಕೆ ಹೋಗುತ್ತಾ ಶಂತನು ಚಕ್ರವರ್ತಿ ಬೇಟೆಗೆ ಹೊರಡುವ ಕಾಲ.. ಈ ಬೇಟೆಎಂಬುವುದೊಂದು ಕ್ರೀಡೆ ಅಂತ ಹೇಳುತ್ತಾ ಮಲ್ಲನೇ ಒಂದು ಕಡೆಯಿಂದ ನಮ್ಮ ನಾಡಿನಜನಪದ ಕ್ರೀಡೆಗಳಲ್ಲಿ ಒಂದಾದ ಕಂಬಳದ ಬಗ್ಗೆ ಮಾತಾಡುತ್ತಾರೆ. ಆದರೆ ಯಾವುದೇಕಾರಣಕ್ಕೂ ಕಂಬಲ… ಎತ್ತು ಎಂಬ ಯಾವ ಶಬ್ಧವೂ ಬರುವುದಿಲ್ಲ ಅವರ  ಬಾಯಿಂದ…. ಆದರೆ ಕಂಬಳ ನಿಷೇದದ ಬಗೆಗಿನ ಅವರೊಂದು ಅಭಿಪ್ರಾಯವನ್ನು ಶಂತನು ಆಗಿಹೇಳುತ್ತಾರೆ…!



ಫ್ಲೇ.



“ಬೇಟೆ ಅಂದರೆ ಇದೊಂದು ನಮ್ಮ ನಾಡಿನ ಕಲೆ ಇದೊಂದು ನಮ್ಮ ನಾಡಿನ ಕ್ರೀಡೆ. ಬೇಟೆ ಕ್ರೀಡೆಗೆ ಸಂಬಂಧಿಸಿದ್ದೇ ಹೊರತು ವ್ಯಸನಕ್ಕೆ ಸಂಬಂಧಿಸಿದ್ದಲ್ಲ. ಮತ್ತೆ ಈ ಕ್ರೀಡೆಯಿಂದ ಹಿಂಸೆಯಾಗುತ್ತದೆ, ಇನ್ನೊಂದಾಗುತ್ತದೆ ಮತ್ತೊಂದು ಆಗುತ್ತದೆ ಎಂದು ಇಲ್ಲ. ಕ್ರೀಡೆಯ ಮೇಲೆ ಇನ್ನು ಮುಂದೆ ಪ್ರಾಣಿ ಹಿಂಸೆ ಸಲ್ಲದು ಎಂಬ ಆಕ್ಷೇಪ ಬರಬಹುದು. ಆದರೆ ಸಧ್ಯ ನಮ್ಮಲ್ಲಿ ಬಹುದೊಡ್ಡ ಕ್ರೀಡೆಯೆಂದರೆ ಬೇಟೆ.”



ಈ ಮೇಲಿನ ಮಾತನ್ನು ಹೇಳುವಲ್ಲಿ ಶೇಣಿಯವರ ಪ್ರಜ್ಞೆಯ ಧ್ವನಿಯನ್ನು ಗಮನಿಸಬೇಕು. ಯಾವುದನ್ನು ನೇರವಾಗಿ ಬೆತ್ತಲುಗೊಳಿಸಿ ಹೇಳುವುದಿಲ್ಲ. ಹಾಗೆ ನೋಡಿದ್ರೆ ರಂಜನೆಗಾಗಿಯಾದರೂ ನಮ್ಮ ಊರಿನ ಕಂಬಳವನ್ನೋ ಅಥವಾ ಕೋಳಿ ಅಂಕವನ್ನೋ ನೇರವಾಗಿ ಹೇಳಬಹುದು, ಹೇಳುವವರು ಇದ್ದಾರೆ ಕೂಡ. ಆದರೆ ಶಂತನುವಾಗಿ ತಾನು ಕುಳಿತಿರುವ ಸಿಂಹಾನಸದ ಊರು ಯಾವುದು, ಆ ಊರಿನಲ್ಲಿ ಈ ಕ್ರೀಡೆ ಇತ್ತೋ ಇಲ್ವೋ ಎಂಬ ಪ್ರಜ್ಞೆ ಪ್ರೇಕ್ಷಕನಾದ ನಮ್ಮಲ್ಲೂ ಜಾಗೃತಿಗೊಳಿಸಿದ್ದಾರೆ. ಈ ಪ್ರಜ್ಞೆ ಇಲ್ಲದ ಕೆಲವರ ಅರ್ಥ ಕೇಳುವಾಗ ಶಂತನು ನಮ್ಮ ಗದ್ದೆಯ ಕಟ್ಟಪುಣಿಯಲ್ಲಿ ( ಗದ್ದೆ ಬದು) ಕೂತು ಮಾತಾಡಿದಷ್ಟು ಹಗುರವಾಗಿ ಬಿಡುವ ಅಪಾಯ ಇದೆ



ಇನ್ನು ನಾವೀಗ

ಶೇಣಿಯವರು ರಾವಣವಧೆಯ ರಾವಣನಾಗಿ ಮಾತಾಡುವ ಆರಂಭದ ಒಂದೇ ಒಂದು ಮಾತನ್ನು ಕೇಳಬೇಕು.

ಒಂದೇ ವಾಕ್ಯದಲ್ಲಿ ರಾಮಾಯಣದ ರಾಮನ ಸ್ಥಿತಿ ಏನಾಗಿತ್ತು ಈಗ ಏನಾಗಿದೆ. ರಾವಣನ ಸ್ಥಿತಿ ಏನಾಗಿತ್ತು ಈಗ ಏನಾಗಿದೆ. ಎನ್ನುವುದನ್ನು ಹೇಳುತ್ತಾರೆ.



ಪ್ಲೇ….





ಹುಟ್ಟಿನಿಂದಲೇ ಓಲಗದಲ್ಲಿರಬೇಕಾದವನು ಮರದ ಬುಡದಲ್ಲಿ. ಯಾರಿಗೂ ಯಾವ ಕಾಲದಲ್ಲಿಯೂ ಊಹಿಸಲಿಕ್ಕೆ ಬಾರದೆ ಇದ್ದಂತಹ ಒಬ್ಬ ಮರದ ಬುಡದಲ್ಲಿ ಹುಟ್ಟಿದವ ಓಲಗದ ಚಾವಡಿಯಲ್ಲಿ.





ಇಂತಹ ಶೇಣಿಯವರ ಅರ್ಥವನ್ನು ಕೇಳಿ ಅರ್ಥೈಸಿಕೊಳ್ಳುವವನು ಒಂದು ಲೆವೆಲ್ ನವನೇ ಆಗಿರಬೇಕು.



ಇಲ್ಲ ಅಷ್ಟು ಸುಲಭಕ್ಕೆ ಶೇಣಿಯವರ ಮಾತು ಅರ್ಥ ಆಗುವುದಿಲ್ಲ. ಮತ್ತೆ ಮತ್ತೆ ಕೇಳುತ್ತಾ ಸಾಗಿದಾಗೆಲ್ಲಾ ಅದೊಂದು ಪುಸ್ತವನ್ನೇ ಓದಿ ಮುಗಿಸದ ಸುಖ ನಮಗೆ ಸಿಗುತ್ತದೆ.



ಇಂತಹ ಶೇಣಿಯವರ ಬಗ್ಗೆ ನೆನಗೆ ಅನ್ನಿಸುತ್ತಾ ಇದ್ದದ್ದು ನನ್ನ ಅಮ್ಮನಿಗೆ ಪ್ರಾಯ ಕಡಿಮೆ ಆಯ್ತೇನೋ ಅಂತ, ಒಂದು. ಇನ್ನೊಂದು ಕಡೆಯಿಂದ ಅನ್ನಿಸುವುದು ಶೇಣಿಯವರ ಅಮ್ಮನಿಗೆ ಪ್ರಾಯ ಹೆಚ್ಚಾಯ್ತೇನೋ ಎಂದು. ಅಂದರೆ ಅವರು ಇದ್ದಾಗಲೇ ನಾನು ಹುಟ್ಟಿ ಬೆಳೆದಿರಬೇಕಿತ್ತು ಅಂತ. ಏನಿಲ್ಲದೇ ಇದ್ದರೂ ಒಂದು ಬ್ಯಾಗ್ ಹಿಡ್ಕೊಂಡ ಅವರ ಹಿಂದೆ ಹೋಗ್ತಾ ಇರಬಹುದಿತ್ತೇನೋ ಅಂತ ಅನ್ನಿಸುವುದು.



ಇದಕ್ಕಿಂತ ಹೆಚ್ಚಾಗಿ ಏನೂ ಹೇಳುವುದಕ್ಕೂ ನನಗೆ ಬರುತ್ತಿಲ್ಲ.



ಯಾಕೆಂದರೇ ಸದಾ ವೇದಿಕೆಯಲ್ಲಿರುವವರು ಸಭೆಯಲ್ಲಿದ್ದಾರೆ, ಸದಾ ಸಭೆಯಲ್ಲೇ ಇರಬೇಕಾದ ನಾನು ವೇದಿಕೆಯಲ್ಲಿದ್ದೇನೆ.

ಇದು ಶೇಣಿಯವರ ರಾವಣನ ಶೈಲಿಯಲ್ಲಿ ಹೇಳಿದ್ದು.



ಎಲ್ಲರಿಗೂ ಪ್ರೀತಿಯ ನಮಸ್ಕಾರ.



💈ಸುಧಾಕರ ಜೈನ್ ಹೊಸಬೆಟ್ಟು ಗುತ್ತು

Saturday, March 24, 2018

ಬೆನ್ನಿನ ಮೇಲೆ ಗ್ರೀಸಿನ ಮೂರು ಗೆರೆಗಳು.

💈 ಬೆನ್ನಿನ ಮೇಲೆ ಗ್ರೀಸಿನ ಮೂರು ಗೆರೆಗಳು.
💈 

🚏 23/03/2018

🏀 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.


ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ಬೈಕಲ್ಲಿ ಬರ್ತಾ ಇದ್ದೆ. ಗಂಟೆಗೆ 40ಕಿಲೋ ಮೀಟರ್ ನ ಸ್ಪೀಡನಲ್ಲಿದ್ದ  ಬೈಕನ್ನು ಓವರ್ ಟೇಕ್ ಮಾಡಿ ಹೋಗುತ್ತಿದ್ದ ವಾಹನಗಳೆಲ್ಲವೂ ಮರು ಕ್ಷಣದಲ್ಲಿ ಮಾಯವಾಗುತ್ತಿದ್ದವು.

ಊರಲ್ಲಿ ಜೋರಾಗಿ ಮಳೆ ಬಂದಾಗ, ಮನೆಯ ಮುಂದಿನ ಕಿರು ನದಿಯ ದಂಡೆಯಲ್ಲಿರುವ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದೆ.  ಹರಿದು ಹೋಗುತ್ತಿದ್ದ ನೀರನ್ನೇ ನೋಡುತ್ತಾ ಇದ್ದೆ. ಅಲ್ಲೂ ಹೀಗೆ, ನೀರಲ್ಲಿ ತೇಲಿಕೊಂಡು ಬರುವ ತೆಂಗಿನ ಕಾಯಿಯೋ ಮರದ ದಿಮ್ಮಿಯೋ ನೋಡು ನೋಡುತ್ತಿದ್ದಂತೆ ವೇಗವಾಗಿ ನೀರಿನೊಡನೆ ಹರಿದು ಹೋಗುತ್ತಲೆ ಇದ್ದವು.

ಬೆಂಗಳೂರಿನ ಅಂತರರಾಷ್ಟ್ರೀಯ ರಸ್ತೆಯ ಬದಿಯ ಎತ್ತರದಲ್ಲಿ ಕುಳಿತು ನೋಡಿದರೆ, ಊರಿನ ತೋಡು ನೆನಪಾಗುತ್ತದೆ.

ಅಲ್ಲೂ ಹರಿಯುತ್ತದೆ. ಇಲ್ಲೂ ಹರಿಯುತ್ತದೆ.

ಎಡವಿ ಹರಿತಕ್ಕೆ ಸಿಕ್ಕಿಕೊಂಡರೆ

ಅಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಇಲ್ಲಿ ಹರಿದು ಹರಿದು ಹರಿದುಕೊಂಡೇ ಹೋಗುತ್ತದೆ.

ಅಲ್ಲಿಯಾದರೂ ಈಜಬಹುದು. ಇಲ್ಲಿ ಈಜುವುದು ಬಿಡಿ ತೇಲುವುದಕ್ಕೂ ಉಳಿಯದಂತಾಗುತ್ತದೆ.



ನನ್ನ ಗಾಡಿ ಪ್ಲೈಓವರ್ ಮೇಲೆ ಹತ್ತಿತ್ತು. ಅಲ್ಲೊಂದು ಮೂರು ಚಕ್ರದ ಜೀಪ್ ನಿಂತಿತ್ತು...! 

ಅಲ್ಲ ಚಕ್ರ ನಾಲ್ಕಿತ್ತು.

ಆದರೆ ಒಂದು, ಗಾಡಿಯ ನಟ್ಟು ಬೋಲ್ಟ್ ಗಳ ನಂಟನ್ನು ಕಳಚಿಕೊಂಡಿತ್ತು. 

ಮೂರು ಜನ ಇದ್ದರು. 

ಇಬ್ಬರು ಜೀಪನ್ನು ಎತ್ತುತ್ತಿದ್ದರು.

ಒಬ್ಬರು ಜೀಪಿನ ಪ್ಲೇಟ್ ಗೆ ಜ್ಯಾಕ್ ಕೊಡಲು ನೋಡುತ್ತಿದ್ದರು.

ಸ್ವಲ್ಪ ಎತ್ತರಕ್ಕೆ ಎತ್ತುತ್ತಿದ್ದಂತೆ ಆಗದು ಎಂದು ಕೆಳಗಿರುಸುತ್ತಿದ್ದರು. 

ನಾನು ನನ್ನ ಬೈಕಿನ ಸೈಡ್ ಸ್ಟಾಂಡನ್ನು ನೆಲಕ್ಕೂರಿಸಿದೆ. ಬೈಕಿನ ಕೀ ಯನ್ನು ಕಿಸೆಯೊಳಗಿಟ್ಟುಕೊಂಡೆ. ಅವರ ಬಳಿಗೆ ಹೋದೆ. ಜೀಪಿಗೆ ಕೈ ಕೊಟ್ಟೆ. ಜೋರಲ್ಲಿ ಬಾಯಿಂದ ಸೌಂಡ್ ಮಾಡಿದೆ. 

"ಐಸಭಾ..... ದೆತೊನಿ... ಹ್ವಾಯ್ ಪಾಡ್ ... ಪಾಡ್. ಪಾಡ್ ಮಿತ್ತ್... ದೆರ್ಪಿ... ಆಂಡ್ ಪೋಂಡ್....” ಇದು ನಮ್ಮ ತುಳು ಭಾಷೆಯ ಪದಗಳು.

ಒಂದು ನಾಲ್ಕು ಜನ ಸೇರಿ ಭಾರದ ವಸ್ತಗಳನ್ನು ಎತ್ತುವಾಗ ಅಥವಾ ಸಾಗಿಸುವಾಗ ಪರಸ್ಪರರ ಶಕ್ತಿಯನ್ನು ದ್ವಿಗುಣಗೊಳಿಸುವಲ್ಲಿ ಪ್ರೇರಣಾ ಶಕ್ತಿಯಾಗಿ, ಮೋಟಿವೇಟ್ ಗಾಗಿ ಈ ಶಬ್ಧಗಳನ್ನು ಫುಲ್ ಎನರ್ಜಿಟಿಕ್ ಆಗಿ ಹೇಳುವುದಿದೆ. ಹಾಗೆ ನೋಡಿದರೆ ಒಬ್ಬ ಇದನ್ನು ಎನರ್ಜಿಟಿಕ್ ಆಗಿ ಹೇಳುವ ಶೈಲಿಗೇ ಕೆಲಸದ ಭಾರ ಅರ್ಧದಷ್ಟು ಕಡಿಮೆಯಾಗಿರುತ್ತದೆ.

ಹೀಗೆ ನಾನಿಲ್ಲಿ ಜೀಪಿಗೆ ಕೈ ಕೊಟ್ಟು ಫುಲ್ ಸೌಂಡ್ ಮಾಡಿ ಇಷ್ಟು ಹೇಳುವಾಗ ಜ್ಯಾಕ್ ಜೀಪಿನ ಪ್ಲೇಟ್ ಕೆಳಗಡೆ ಕುಳಿತಿತ್ತು. ಮೂರೂ ಜನರು ಒಂದು ಕ್ಷಣ ನನ್ನೆಡೆಗೆ ನೋಡಿ ಒಂದು ಉಸಿರು ಬಿಟ್ಟರು. 

ಅವರಂದುಕೊಂಡಿದ್ದರು ನಾನು ಬಂದು ಎತ್ತಿದ್ದರಿಂದಲೇ ಆಯ್ತು ಅಂತ.    


ಆದರೆ ಸತ್ಯ ಹೇಳಬೇಕೆಂದರೆ, ನಿಜಕ್ಕೂ ನಾನು ಒಂದು ಹತ್ತು ಕೆಜಿಯಷ್ಟೂ ಭಾರ ಎತ್ತಲಿಲ್ಲ. ಕಾಲು ಉಳುಕಿದ್ದರಿಂದ ಎತ್ತಲು ಆಗುತ್ತಲಿರಲಿಲ್ಲ. 

ಅವರೇ ಎತ್ತಿದ್ದು. ಮೊದಲು ಎತ್ತಲು ನೋಡಿದಾಗ ಆಗದೇ ಇದ್ದದ್ದು ಈಗ ಆಗಿಯೇ ಹೋಯ್ತು. 

ನಾನು ಮಾಡಿದ್ದು ಕೇವಲ ಒಂದು ಮೋಟಿವೇಷನ್ ಸೌಂಡ್ ಅಷ್ಟೇ. ಅದು ಅವರಲ್ಲೇ ಕಮರಿ ಹೋಗಿದ್ದ ಪೋಸಿಟಿವ್ ಎನರ್ಜಿಯನ್ನು ಚಿಗುರಿಸಿತು. ಅವರ ಒಳಗಿದ್ದ ಅಷ್ಟೂ ಶಕ್ತಿಯನ್ನು ಹೊರಗೆ ತಂದಿತ್ತು.

ಮೂವರೂ ಬಂದು ಕೈ ಕುಲುಕಿದರು.  ಪರಸ್ಪರ ಹೆಸರು ಹೇಳಿಕೊಂಡೆವು. ಒಬ್ಬನ ಹೆಸರು ರಝಾಕ್.
 ಇನ್ನೊಬ್ಬನ ಹೆಸರು ಶಂಕರ. ಮತ್ತೊಬ್ಬರು ಜೀಪಿನ ಮಾಲೀಕ ರಹೀಮ.

ಈ ರಹೀಮರಿಗೆ ಗೆದ್ದ ಮರುಕ್ಷಣದ ಭಾವುಕತೆ.  
ಹತ್ತಿರಕ್ಕೆ ಎಳೆದುಕೊಂಡು ಬೆನ್ನ ಮೇಲೆ ಕೈ ಇಟ್ಟರು. ತಟ್ಟಿದರು. ಸವರಿದರು.

ಶಂಕರ ಟಯರ್ ಫಿಕ್ಸ್ ಮಾಡಿ ಬೋಲ್ಟ್ ಗಳನ್ನು ತಿರುಗಿಸುತ್ತಿದ್ದರು. ರಝಾಕ್ ಜ್ಯಾಕನ್ನು ಸಡಿಲಿಸುತ್ತಿದ್ದರು.

ನಾವಿದ್ದ ಪ್ಲೈ ಓವರ್ ಎಂಬೀ ಮೇಲು ಸೇತುವೆಯ ರಸ್ತೆಯ ಹೊಯಿಲಿನಲ್ಲಿ ವಾಹನಗಳು ಹರಿದು ಹೋಗುತ್ತಲೇ ಇದ್ದವು. 




ಜೀಪ್ ರೆಡಿ ಆಯ್ತು. ರಹೀಮರೇ ಡ್ರೈವರ್ ಸೀಟಲ್ಲಿ ಕುಳಿತರು. 
ಅವರು ಗಾಡಿ ಸ್ಟಾರ್ಟ್ ಮಾಡಿದರು. ಕ್ಲಚ್ ಬಿಟ್ಟರು. ಎಕ್ಸೆಲರೇಟರು ಕೊಟ್ಟರು.

ನಾನೂ ಗಾಡಿ ಸ್ಟಾರ್ಟ್ ಮಾಡಿದೆ. ನೆಲಕ್ಕೂರಿಸಿದ್ದ ಸ್ಟಾಂಡ್ ತೆಗೆದೆ. ಎಕ್ಷೆಲರೇಟರ್ ಕೊಟ್ಟೆ.

ಮನೆಗೆ ಬಂದು ಅಂಗಿ ತೆಗೆದೆ. ಅಂಗಿಯ ಬೆನ್ನಿನ ಮೇಲೆ ಗ್ರೀಸಿನ ಮೂರು ಗೆರೆಗಳು.

ಬೆನ್ನು ಸವರಿದ, ಬೆನ್ನು ತಟ್ಟಿದ ರಹೀಮರ ಬೆರಳಿನ ಅಚ್ಚು ನನ್ನ ಬೆನ್ನ ಮೇಲೆ ಇತ್ತು.

ರಾಮ ಸೇತುವೆ ದಾಟಿ ಹೋದ. ಅಳಿಲಿನ ಬೆನ್ನ ಮೇಲೆ ಮೂರು ಗೆರೆ ಎಳೆದ.

ರಹೀಮ ಮೇಲು ಸೇತುವೆ ದಾಟಿ ಹೋದ. ನನ್ನ ಬೆನ್ನ ಮೇಲೆ ಗ್ರೀಸಿನ ಮೂರು ಗೆರೆ ಎಳೆದು ಹೋದ. 



🏀 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

🎯 9900500832. 


🐿🥢🐿🥢🐿🥢🐿🥢🐿