🏮🌿🏮🌿🏮
ಮೋದಪ್ರಮೋದಾ
🏮🌿🏮🌿🏮
🌻 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.
10/07/2020
ಇಬ್ಬರು ಒದ್ದೆಯಾಗದಂತೆ ಜೊತೆಯಾಗಿ ಹೋಗುವಷ್ಟು ದೊಡ್ಡದಾದ ಛತ್ರಿ. ಅದನ್ನು ಬಿಡಿಸಿ ಹಿಡಿದುಕೊಂಡು ನಡೆಯುತ್ತಿದ್ದಳು ಪ್ರಮೋದಾ. ಒಂದು ಕೈಯಲ್ಲಿ ಛತ್ರಿ ಇನ್ನೊಂದು ಕೈಯಲ್ಲಿ ಮುದ್ದೆ ಮಾಡಿ ಎತ್ತಿ ಹಿಡಿದುಕೊಂಡ ಲಂಗ. ಬೆನ್ನಿನ ಮೇಲೊಂದು ಬ್ಯಾಗ್. ಪೈಥಾಗೊರಸನ ಪ್ರಮೇಯ , ನ್ಯೂಟನನ ಚಲನೆಯ ನಿಯಮ , ಕುವೆಂಪುರವರ ಓ ನನ್ನ ಚೇತನ ಇವೆಲ್ಲಾ ಇರುವ ಪುಸ್ತಕಗಳ ಬ್ಯಾಗ್. ಇಷ್ಟು ಭಾರಗಳನ್ನು ಹೊತ್ತ ಆ ಬ್ಯಾಗ್ ನ ಭಾರವೆಲ್ಲಾ ಪ್ರಮೋದಾಳ ಹೆಗಲಮೇಲೆ ಬಿದ್ದು ಎದೆಯನ್ನೆತ್ತಿ ನಡೆಯುವುದನ್ನು ಕಲಿಸಿಕೊಡುತ್ತಿತ್ತು.
ಗದ್ದೆಯನ್ನು ದಾಟಿ ಹೋದರೆ ಕಾಡಿನ ಮಧ್ಯೆ ಸಾಗುವ ದಾರಿ. ಆ ದಾರಿ ಆರಂಭ ಆಗುವಲ್ಲೆ ಒಂದು ಮರದ ಕೆಳಗೆ ಕಾಯುತ್ತಿರುವ ನಾಗೇಂದ್ರ. ನಾಗೇಂದ್ರನದ್ದು, ಒಬ್ಬನೇ ಹೋದರೂ ಒದ್ದೆಯಾಗುವಷ್ಟು ಚಿಕ್ಕದಾದ ಛತ್ರಿ. ಪ್ರಮೋದಾಳು ಮರದ ಹತ್ತಿರ ಬರುತ್ತಿದ್ದಂತೆ ಮರದ ಬುಡದಿಂದ ನಾಗೇಂದ್ರ ‘ಪ್ರಮೋದಾಳ ದಾರಿಗೆ’ ಬರುತ್ತಿದ್ದ. ಅಲ್ಲಿಂದ ಒಟ್ಟಿಗೇ ಮಾತಾಡುತ್ತಾ ಮಾತಾಡುತ್ತಾ ರಸ್ತೆ ಬದಿಯವರೆಗೆ ಜೊತೆಗೇ ಹೋಗುವುದು. ಮಳೆ ಇಲ್ಲದೇ ಇದ್ದರೆ, ಒಬ್ಬನೇ ಹೋದರೂ ಒದ್ದೆಯಾಗುವಷ್ಟು ಚಿಕ್ಕದಾದ ನಾಗೇಂದ್ರನ ಛತ್ರಿಯಡಿಯಲ್ಲಿ ಇಬ್ಬರೂ ಅಂಟಿಕೊಂಡು ಸ್ವಲ್ಪ ದೂರದವರೆಗೆ ನಡೆಯುವುದು. ಬದುಕಿನಲ್ಲಿ ಮುಂದೊಂದು ದಿನ ಏಳು ಹೆಜ್ಜೆಯನ್ನು ಹಾಕಬೇಕು ಎಂಬ ನಂಟಿನ ಪ್ರೀತಿಯ ಕನಸಿನಲ್ಲಿ ಒಂದೇ ಛತ್ರಿಯಡಿಯಲ್ಲಿ ಅಂಟಿಕೊಂಡು ಅಂಟಿಕೊಂಡು ನಡೆಯುವುದು.
ಮಳೆ ಬರುತ್ತಿದ್ದರೆ, ಇಬ್ಬರೂ ತಮ್ಮ ತಮ್ಮ ಮುಖವನ್ನು ಬಾಡಿಸಿಕೊಂಡು ಛತ್ರಿಗಳನ್ನು ಅರಳಿಸಿಕೊಂಡು ತಮ್ಮ ಛತ್ರಿಗಳು ಪರಸ್ಪರ ತಾಗುವಂತೆ ಹಿಡಿದುಕೊಂಡು ನಡೆಯುವುದು.
ರಸ್ತೆ ಬದಿಗೆ ಬರುತ್ತಿದ್ದಂತೆ, ನಾಗೇಂದ್ರ ಬಸ್ಸು ಹತ್ತಿ ನಗರಕ್ಕೆ ಕೆಲಸಕ್ಕೆ ಹೋಗುವುದು. ಪ್ರಮೋದಾ ಮತ್ತೆ ಒಂದಷ್ಟು ನಡೆದುಕೊಂಡು ತನ್ನ ಕೊನೆಯ ವರ್ಷದ ಹೈಸ್ಕೂಲಿಗೆ ಹೋಗುವುದು.
ಕಾಡಿನ ಮಧ್ಯದ ದಾರಿಯಲ್ಲಿ ಮಗಳೊಬ್ಬಳನ್ನೇ ಶಾಲೆಗೆ ಕಳುಹಿಸುವ ಭಯ ಪ್ರಮೋದಾಳ ತಂದೆ ಸೀತಾರಾಮರಿಗೆ ಇತ್ತು. ಹಾಗಂತ ದಿನಾಲು ತಾನೇ ಮಗಳನ್ನು ಶಾಲೆಯವರೆಗೋ ಅಥವಾ ರಸ್ತೆ ಬದಿಯವರೆಗೋ ಬಿಟ್ಟು ಬರುವುದು ಒಬ್ಬ ರೈತನಾಗಿ ತನ್ನ ದಿನನಿತ್ಯದ ಕೆಲಸಗಳ ನಡುವೆ ಅದು ಅಸಾಧ್ಯವಾಗಿತ್ತು. ಹಾಗಾಗಿ ದಿನಾಲೂ ಕೆಲಸಕ್ಕೆಂದು ನಗರಕ್ಕೆ ಹೋಗುವ ನಾಗೇಂದ್ರನ ಜೊತೆಗೆ ರಸ್ತೆ ಬದಿಯವರೆಗೆ ಮಗಳನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದರು.
ಕಾಡಿನ ದಾರಿಯಲ್ಲಿ ಧೈರ್ಯಕ್ಕೆ ಜೊತೆಯಾದ ನಾಗೇಂದ್ರನೇ ತನ್ನ ಬದುಕಿನಲ್ಲಿ ಕಾಡುವ ದಾರಿಗಳಲೆಲ್ಲಾ ಜೊತೆಯಾಗಬೇಕು ಎಂದು ಧೈರ್ಯದಲ್ಲಿ ಆಸೆ ಪಟ್ಟವಳು ಪ್ರಮೋದಾ.
ಹೈಸ್ಕೂಲಿನಲ್ಲಿ ಅತ್ಯುತ್ತಮ ಅಂಕ ಪಡೆದು ನಗರದ ಕಾಲೇಜು ಸೇರಿಕೊಂಡಳು.
ರಸ್ತೆಯ ಬದಿಯವರೆಗಷ್ಟಕ್ಕೆ ಜೊತೆಯಾಗಿ ಹೋಗುತ್ತಿದ್ದವರು ನಗರದವರೆಗೂ ಒಟ್ಟಿಗೆ ಹೋಗುವ ದಿನಗಳು ಬಂತು.
ಪ್ರಮೋದಾಳದ್ದು ಪಿಯುಸಿ ಪಾಸಾಗಿ ಡಿಗ್ರಿ ಸೆರುವ ಹೊತ್ತಿಗೆ ನಾಗೇಂದ್ರನಿಗೆ ಬೈಕ್ ಬಂದಿತ್ತು.
ಬಸ್ಸಿನಲ್ಲಿ ದೂರ ದೂರ ಕುಳಿತು ಪ್ರಯಾಣ ಮಾಡುತ್ತಿದ್ದವರು ಬೈಕಿನಲ್ಲಿ ಒಂದೇ ಸೀಟಿನಲ್ಲಿ ಕುಳಿತುಕೊಂಡು ಹೋಗುವ ಪ್ರಯಾಣವನ್ನು ಆರಂಭಿಸಿದರು.
ಬೈಕಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡುವಾಗ ಪ್ರಮೋದಾಳ ತುಟಿಗಳು ನಾಗೇಂದ್ರನ ಹತ್ತಿರ ಹತ್ತಿರ ಇರುತ್ತಿತ್ತು. ಹತ್ತಿರ ಅಂದರೆ ಯಾರಾದರೂ ಇರಬಹುದಾದ ಪ್ರದೇಶಕ್ಕೆ ಬಂದಾಗ ಮಾತ್ರ ಸ್ವಲ್ಪ ಹಿಂದೆ ಸರಿಯುತ್ತಿತ್ತು.
ಹೆಚ್ಚು ಹೊತ್ತು ಬೈಕಿನಲ್ಲಿ ಜೊತೆಗೇ ಇರಬೇಕೆಂಬ ಆಸೆ ಪಡುವ ಪ್ರಣಯದ ವೇಗ ಅದು. ಹಾಗಾಗಿ ಬೈಕಿನ ಪ್ರಯಾಣದ ವೇಗ ಬಹಳ ನಿಧಾನ.
ಬೈಕಿನ ಪ್ರಯಾಣದಲ್ಲಿ ಊರಿನವರೆಲ್ಲರ ಸುದ್ದಿಗಳನ್ನು ಮಾತಾಡುತ್ತಾ ಸಾಗುತ್ತಿದ್ದರು.
ಅಂತಿಮ ವರ್ಷದ ಡಿಗ್ರಿ ಮುಗಿಯುವ ಹೊತ್ತಿಗೆ ಊರಿನವರೆಲ್ಲ ಪ್ರಮೋದಾ ಮತ್ತು ನಾಗೇಂದ್ರನ ಸುದ್ದಿ ಮಾತಾಡುವಂತಾಯ್ತು.
ಸುದ್ದಿ ಸೀತಾರಾಮರ ಕಿವಿಗೂ ಬಿತ್ತು. ಬೈಕಿನಲ್ಲಿ ಹೋಗುತ್ತಿದ್ದ ಪ್ರಮೋದಾಳು ಮತ್ತೆ ಬಸ್ಸನ್ನೇರುವಂತಾಯ್ತು…!
ಹಾಗಂತ ಸೀತಾರಾಮರಿಗೂ ನಾಗೇಂದ್ರ ಅಂದರೆ ಬಹಳ ಪ್ರೀತಿ. ಅಳಿಯ ಸಿಕ್ಕರೆ ಈ ನಾಗೇಂದ್ರನಂತಹ ಅಳಿಯನೆ ಸಿಗಬೇಕು ಎಂದು. ಆದರೆ ನಾಗೇಂದ್ರನಂತಹ ಅಳಿಯನೇ ಬೇಕು ವಿನಃ ನಾಗೇಂದ್ರನೇ ಅಳಿಯನಾಗಿ ಬೇಡ.
ಕಾರಣ ಜಾತಿ…. ಅಷ್ಟೇ. ಅದೊಂದು ಬಿಟ್ಟರೆ ಬೇರೆ ಏನೂ ಇಲ್ಲ.
ಪ್ರಮೋದಾಳದ್ದು ಡಿಗ್ರಿ ಮುಗಿಯಿತು. ಮದುವೆಯ ಸಿದ್ಧತೆಗಳು ಆರಂಭ ಆಯ್ತು.
ತನ್ನನ್ನು ನೋಡಲು ಬಂದ ಹುಡುಗನನ್ನೊಮ್ಮೆ ನೋಡುವ ಮುನ್ನ ತನ್ನನ್ನೇ ತಾನೊಮ್ಮೆ ನೋಡಬೇಕೆಂದು ಕನ್ನಡಿಯ ಮುಂದೆ ನಿಂತರೆ ಕನ್ನಡಿಯಲ್ಲಿ ನಾಗೇಂದ್ರನೇ ಕಾಣುತ್ತಾನೆ ಪ್ರಮೋದಾಳಿಗೆ.
ಪ್ರಮೋದಾ ಎಂದು ಕರೆದ ಸ್ವರ ಕೇಳಿದಾಗಲೇ ಕನ್ನಡಿಯಲ್ಲಿ ತನಗೆ ತಾನು ಕಂಡಿದ್ದು.
ಚಹಾ ತುಂಬಿದ ಲೋಟಗಳನ್ನು ತಟ್ಟೆಯಲ್ಲಿ ಹಿಡಿದುಕೊಂಡು ತಾಯಿ ಬಂದು ಮಗಳ ಪಕ್ಕದಲ್ಲಿ ನಿಂತು ಕಣ್ಣೀರು ಒರೆಸಿಕೊಂಡರು.
ಮಗಳೇ ನಿನ್ನ ಅಪ್ಪನ ಕೋಪ ನನಗೆ ಮಾತ್ರ ಗೊತ್ತು. ಅವರ ಮಾತಿಗೆ ವಿರುದ್ಧವಾಗಿ ಹೋದರೆ ಏನಕ್ಕೇನೂ ಮಾಡಿಯಾರು ಮಗಳೇ. ಪ್ರೀತಿ ಸತ್ತರೆ ತೊಂದರೆ ಇಲ್ಲ ಮಗಳೇ. ಪ್ರೇಮಿ ಸಾಯಬಾರದು. ನಿನ್ನ ಪ್ರೀತಿಯನ್ನೇ ಕೊಂದು ಬಿಡು ಮಗಳೇ.
ಚಹಾ ತುಂಬಿದ ಲೋಟಗಳ ತಟ್ಟೆಯನ್ನು ಕೈಗೆತ್ತಿಕೊಂಡು ಹೊರಟಳು ಪ್ರಮೋದಾ ಹುಡುಗನನ್ನು ನೋಡಲು.
ನನ್ನ ಪ್ರೀತಿಯನ್ನು ಕೊಲ್ಲಲಾರೆ. ಅಮ್ಮ ಮಾಡಿದ, ಮಗಳು ಕೊಡುವ ಚಹಾವನ್ನು ಕುಡಿದು ಬದುಕಿನ ಸಂಗಾತಿಯನ್ನು ನಿರ್ಣಯ ಮಾಡುವ ಹುಡುಗನೊಡನೆ ಬದುಕುವುದಕ್ಕಿಂತ, ಪ್ರೀತಿಯನ್ನು ಬದುಕಿಸುವುದು ಒಳ್ಳೆಯದು. ಪ್ರೀತಿಯನ್ನು ಬದುಕಿಸಲು ಪ್ರೇಮಿಗಳಿಬ್ಬರೂ ನಾವುಗಳು ಸತ್ತರೆ ಆಯ್ತಲ್ಲ….! ಎಂದು ಯೋಚಿಸುತ್ತಾ ಪ್ರಮೋದಾ ಹುಡುಗನ ಎದುರು ಬಂದು ನಿಂತಳು.
ಚಹಾ ತಗೊಳ್ಳುವಾಗ ಹುಡುಗನ ಮುಖವನ್ನೊಮ್ಮೆ ನೋಡಿದಳು. ಪ್ರಮೋದಾಳಿಗೆ ತನ್ನ ಬದುಕಿನಲ್ಲೇ ಮೊತ್ತ ಮೊದಲ ಬಾರಿಗೆ ಬೇರೊಂದು ಹುಡುಗನ ರೂಪ ಇಷ್ಟ ಆಯ್ತು.
ಆದರೆ ಅದು ತನ್ನ ಪ್ರೀತಿಯನ್ನು ಕೊಂದು ಬದುಕುವಷ್ಟು ಅಲ್ಲ.
ಸೀತಾರಾಮರು ಮತ್ತು ಹುಡುಗನ ತಂದೆಯವರು ಮುಂದಿನ ಸಿದ್ಧತೆಯ ಬಗ್ಗೆ ಮಾತಾಡುತ್ತಿದ್ದರು.
ಮದುವೆಗೆ ದಿನವೂ ನಿಗದಿ ಆಯ್ತು.
ಮದುವೆಯ ದಿನದ ವರೆಗೆ ಪ್ರಮೋದಾ ಅಂಗಳಕ್ಕೂ ಇಳಿಯದಂತೆ ಆಜ್ಞೆಯಾಯ್ತು.
ಊರಿನ ಎರಡು ಜಾತಿಗಳು ಮಾತಾಡುವ ಮಾತುಗಳು ಸೀತಾರಾಮರ ಎರಡು ಕಿವಿಗಳಿಗೂ ಬಿತ್ತು.
ಮದುವೆಯ ಹಿಂದಿನ ದಿನ ಸಂಜೆ ಸೀತಾರಾಮರು ಮಗಳನ್ನು ಕರೆದು ಒಂದು ಗುಟ್ಟು ಹೇಳಿದರು.
ಪ್ರಮೋದಾ ತಂದೆಯ ಮಾತಿಗೆ ತುಂಬಾ ಸಂತೋಷದಿಂದ ಒಪ್ಪಿದಳು.
ರಾತ್ರಿ ಗಂಟೆ ಹತ್ತಾಯ್ತು. ಮದುಮಗಳು ಪ್ರಮೋದಾ ಮನೆಯ ಒಳಗಲ್ಲ ಅಂಗಳದಲ್ಲೂ ಕಾಣಲಿಲ್ಲ.
ಪ್ರಮೋದಾಳ ಅಮ್ಮ ಗಡಿಬಿಡಿಯಾದರು.
ಗಂಡನಿಗೆ ವಿಷಯ ತಿಳಿಸುವಾ ಎಂದು ಸೀತಾರಾಮರನ್ನು ಹುಡುಕಿದರು.
ಇಲ್ಲ ಸೀತಾರಾಮರೂ ಕಾಣಲಿಲ್ಲ…!
ಪ್ರಮೋದಾಳ ಅಮ್ಮ ಸರಸ್ವತಿ ಅಮ್ಮನವರಿಗೆ ಖಚಿತ ಆಯ್ತು…!
ಇನ್ನೇನು ಮಾಡುವುದೆಂದು ಸರಸ್ವತಿಯಮ್ಮ ಮೆಲ್ಲನೇ ಬಾವಿಯತ್ತ ನಡೆದರು.
ಅಷ್ಟರಲ್ಲಿ ಪ್ರಮೋದಾ ಮತ್ತು ಸೀತಾರಾಮರು ಅಂಗಳಕ್ಕೆ ಕಾಲಿಟ್ಟರು.
ನೀನೆಲ್ಲಿಗೆ ಮಾರೈದಿ..? ಬಾ ನಮಗಿಬ್ಬರಿಗೊಂದು ಊಟ ಹಾಕು.
ಇವತ್ತು ನಮ್ಮ ಮಗಳೀಕೆ ನಾಳೆಯಿಂದ ಗಂಡನ ಜೊತೆಗೆ ಊಟ ಮಾಡುವವಳು.
ಸರಸ್ವತಿಯಮ್ಮ ಹಿಂದೆ ಬಂದರು. ತಂದೆ ಮಗಳಿಗೆ ಊಟ ಹಾಕಿದರು.
ಉಂಡು ಮಲಗಿದರು. ಕತ್ತಲೊಂದು ಮುಗಿದು ಹೋಯ್ತು. ಬೆಳಗಾಯ್ತು.
ಪ್ರಮೋದಾಳ ಮದುವೆಯ ದಿಬ್ಬಣ ಹೊರಟು ಹೋಯ್ತು.
ಮದುಮಗಳು ಮಂಟಪ ಸೇರಿದಳು. ಹೂವಿನ ಮಾಲೆ ಮದುಮಗಳ ಕೈ ಸೇರಿತು.
ತಲೆ ತಗ್ಗಿಸಿ ಹೂವಿನ ಮಾಲೆಯನ್ನು ಹಿಡಿದು ನಿಂತಳು ಮದುಮಗಳು ಪ್ರಮೋದಾ.
ತಲೆ ತಗ್ಗಿಸಿ ನೋಡುತ್ತಿದ್ದ ಪ್ರಮೋದಾಳ ಕಣ್ಣಿಗೆ, ಎರಡು ಪಾದಗಳು ಮೆಲ್ಲ ಮೆಲ್ಲನೆ ಹೆಜ್ಜೆಯನ್ನಿಕ್ಕುತ್ತ ಬಂದು ತನ್ನ ಎದುರು ನಿಂತದ್ದು ಕಂಡಿತು.
ಹಿರಿಯ ಪಾದಗಳಂತೆ ಕಂಡವು ಅವು….!
ಅಂದು ಚಹಾ ಕೊಡುವಾಗ ಪಾದ ನೋಡಲಿಲ್ಲ ಮುಖವನ್ನೇ ನೋಡಿದ್ದು.
“ಹಾಕಿ…. ಮಾಲೆ ಹಾಕಿ” ಎಂದು ಪುರೋಹಿತರು ಮಂತ್ರದ ಧಾಟಿಯಲ್ಲೇ ಹೇಳಿದ್ದು ಪ್ರಮೋದಾಳ ಕಿವಿಗೆ ಬಿತ್ತು.
ಮಾಲೆ ಹಾಕಲೆಂದು ಕೈ ಎತ್ತುವ ಮುನ್ನ ಮುಖ ಎತ್ತಿದಳು.
ಪಾದ ಕಂಡ ಮುನುಷ್ಯನ ಮುಖ ಕಂಡಿತು…!
ಅಲ್ಲಾ ಇದು ನಾನು ಅಂದು ಕಂಡ ಮುಖ ಅಲ್ಲ….!
ಹಿರಿಯ ಪದಗಳಂತೆ ಕಂಡದ್ದಲ್ಲ. ಅದು ಹಿರಿಯ ಪಾದವೇ ಹೌದು. ಹಿರಿಯ ಪಾದದ ಮುಖದಲ್ಲೂ ಹಿರಿತನ ಇತ್ತು.
ಅಮ್ಮಾ ಎಂದು ಪ್ರಮೋದಾ ಕುಸಿದು ಬಿದ್ದಳು.
ಮುಹೂರ್ತದ ಸಮಯ ಮೀರುತ್ತಿದೆ. ಬೇಗ ಬೇಗ ಎಂದು ಪುರೋಹಿತರು ಮಂತ್ರ ಹೇಳುತ್ತಲೇ ಇದ್ದರು.
ಮಗಳ ಮುಖಕ್ಕೆ ನೀರು ಚುಮುಕಿಸಿ ಸರಸ್ವತಿಯಮ್ಮನವರು ಮಗಳನ್ನು ಉಪಚರಿಸಿದರು, ಎಚ್ಚರಿಸಿದರು.
ಕಣ್ಣು ತರೆದ ಪ್ರಮೋದಾ ಒಮ್ಮೆ ಸುತ್ತ ನೋಡಿದಳು.
ಯಾರೋ ಇಬ್ಬರು ಅಪರಿಚಿತರು ತನ್ನ ಹತ್ತಿರವೇ ನಿಂತಂತಾಗಿತ್ತು. ಅವರ ಸೊಂಟದಲ್ಲಿ ನೇತಾಡುತ್ತಿದ್ದ ಪಿಸ್ತೂಲುಗಳು ಕಂಡವು
ಅಮ್ಮ ಮಗಳ ಭುಜವನ್ನು ಅಮುಕಿದರು.
ಮಗಳು ಎದ್ದು ನಿಂತು ಮಾಲೆ ಹಾಕಿದಳು.
ಅಷ್ಟರಲ್ಲಿ ಹೊರಗಿನಿಂದ ನಾಗೇಂದ್ರನ ಅಣ್ಣ ಒಂದು ತಲವಾರು ಹಿಡಿದುಕೊಂಡು “ಏಯ್ ಸೀತಾರಾಮಾ” ಎಂದು ಬೊಬ್ಬಿಡಿತ್ತಾ ಮಂಟಪದತ್ತ ಓಡಿಬರುವುದು ಕಂಡಿತು.
ಅರೆ ಕ್ಷಣದಲ್ಲಿ ಒಂದಷ್ಟು ಪಿಸ್ತೂಲಿನ ಗುಂಡುಗಳು ಆಕಾಶದತ್ತ ಮುಖಮಾಡಿ ಹಾರಿತು.
ನಾಗೇಂದ್ರನ ಅಣ್ಣನ ಸುತ್ತು ಜನ ಸೇರಿದರು.
“ಹಾಕು ಮಗಳೆ ಹಾಕು .. ಹಾರ ಹಾಕು”
ಪ್ರಮೋದಾ ಹಾರ ಹಾಕಿದಳು, ಆತ ಕರಿಮಣಿ ಕಟ್ಟಿದ. ಮದುವೆ ಆಗಿಯೇ ಹೋಯ್ತು.
ಪ್ರಮೋದಾ ಕಾಯುತ್ತಾ ಇದ್ದಳು….! ರಾತ್ರಿ ಅಪ್ಪ ಹೇಳಿದಂತೆ ಆಗುವ ಆ ಒಂದು ಕ್ಷಣಕ್ಕಾಗಿ.
ಕಲ್ಯಾಣ ಮಂಟಪದಿಂದ ಮದುಮಗ ಮದುಮಗಳಿಬ್ಬರೂ, ಮದುಮಗಳ ಮನೆಯಕಡೆಗೆ ಹೊರಟರು.
ಪ್ರಮೋದಾ ಕಾಯುತ್ತಾ ಇದ್ದಳು….! ರಾತ್ರಿ ಅಪ್ಪ ಹೇಳಿದಂತೆ ಆಗುವ ಆ ಒಂದು ಕ್ಷಣಕ್ಕಾಗಿ.
ರಾತ್ರಿ, ಅಪ್ಪ ನನ್ನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದೇ ರೇವತಿಯ ಮನೆಯ ಹತ್ತಿರ. ರೇವತಿಯ ಹತ್ತಿರ ಹೇಳಿದಂತೆ, ನಾಗೇಂದ್ರನನ್ನು ಕರೆಸಿ ಅಪ್ಪ ಮಾತಾಡುವುದು. ಮದುವೆ ಆಗಿ ಸಂಜೆ ಮನೆಗೆ ಬರುತ್ತಿದ್ದಂತೆ ನಮ್ಮ ಮನೆಯ ಹಿಂದೆ ಇರುವ ಕಾಡಿನ ದಾರಿಯಲ್ಲಿ ನಾಗೇಂದ್ರ ಮತ್ತು ನಾನು ಓಡಿ ಹೋಗಿ ರಸ್ತೆ ಸೇರಿದರೆ ಆಯ್ತು. ತಂದೆಯವರೇ ಅಲ್ಲೊಂದು ಗಾಡಿಯ ವ್ಯವಸ್ಥೆ ಮಾಡಿರುತ್ತಾರೆ. ಅಲ್ಲಿಂದ ಊರು ಬಿಟ್ಟು ಹೋಗಿ ಬದುಕುವುದು. ಇದನ್ನು ಮೊನ್ನೆ ನನ್ನನ್ನು ನೋಡಲು ಬಂದ ಮದುಮಗನಲ್ಲೂ ಮಾತಾಡಿ ಎಲ್ಲಾ ವ್ಯವಸ್ಥೆ ಮಾಡಿದ್ದೇನೆ ಅಂದಿದ್ದರು. ಆದರೆ ಇಲ್ಲಿ ನೋಡಿದರೆ ಮದುಮಗನೇ ಬೇರೆ. ಏನು ಆಗಿದೆಯೋ ಏನೋ. ಯೋಚಿಸುತ್ತಾ ಕುಳಿತು ಸಾಗುತ್ತಿದ್ದಂತೆ ಕಾರು ಮದುಮಗಳ ಮನೆಯ ಹತ್ತಿರ ತಲುಪಿತು.
ಮದುಮಗಳು ಪ್ರಮೋದಾ ಕಾರಿನಿಂದ ಇಳಿದವಳೇ ತಲೆಗೂದಲನ್ನು ಸರಿ ಮಾಡಿಕೊಳ್ಳುವ ನೆಪದಿಂದ ಅಲ್ಲೇ ಚೂರು ನಿಂತು, ನಾಗೇಂದ್ರನ ಮನೆ ಇರುವ ಕಡೆ ನೋಡಿದಳು.
ನಾಗೇಂದ್ರನ ಮನೆಯೇ ಕಾಣಲಿಲ್ಲ…!
ದಟ್ಟವಾದ ಹೊಗೆಯೊಂದು ಆಕಾಶವನ್ನು ಸೇರುವಾಸೆಯಿಂದ ನಿಧಾನಕ್ಕೆ ಮೇಲೇರುತ್ತಾ ಇತ್ತು.
ಮೇಲೇರುತ್ತಿರುವ ಹೊಗೆಯೆಡೆಯಲ್ಲಿ ಅಸ್ಪಷ್ಟವಾಗಿ ಮನೆ ಕಾಣಲಾರಂಭಿಸಿತು.
ಓಡಿಬಂದಳು…, ಪ್ರಮೋದಾಳ ಗೆಳತಿ ರೇವತಿ. ಪ್ರಮೋದಾಳನ್ನು ಅಪ್ಪಿಕೊಂಡು ಅತ್ತಳು.
“ಪ್ರಮೋದಾ…. ನಾವು ನಿನ್ನೆ ಮಾತಾಡಿದಂತೆ ಯಾವುದೂ ಆಗಲಿಲ್ಲ ಪ್ರಮೋದಾ. ನಿನ್ನ ಅಪ್ಪ ಹೇಳಿದಂತೆ ನೀನೂ ಕೆಲಸ ಮಾಡಿದೆ. ನಿನ್ನ ಅಪ್ಪ ಹೇಳಿದಂತೆ ನಾನೂ ಕೆಲಸ ಮಾಡಿದ್ದೆ. ಆದರೆ ನಿನ್ನ ಅಪ್ಪ ಮಾತ್ರ ಅವರು ಹೇಳಿದಂತೆ ಕೆಲಸ ಮಾಡಲೇ ಇಲ್ಲ. ಇಲ್ಲ ಪ್ರಮೋದಾ ನಿನ್ನ ಅಪ್ಪ, ಅಪ್ಪನೇ ಅಲ್ಲ. ಅವ ರಾಕ್ಷಸ…!”
“ಏನಾಯ್ತು ರೇವತಿ, ನನ್ನ ನಾಗೇಂದ್ರ ಈಗ ಎಲ್ಲಿದ್ದಾನೆ.”
ಅಲ್ಲಿ ನೋಡು ಪ್ರಮೋದಾ…, ನೋಡು ಅಲ್ಲಿ, ನಿನ್ನ ಅಪ್ಪ ಮತ್ತು ನಿನ್ನ ಗಂಡನ ಮುಖದಲ್ಲೊಂದು ಗೆಲುವಿನ ನಗು ನೋಡು.
ತನ್ನ ಗಂಡನಲ್ಲದ ಗಂಡು ಮತ್ತು ಅಪ್ಪ ನಿಂತಿರುವ ಕಡೆಗೆ ತಿರುಗಿದಳು.
ಅವರಿಬ್ಬರೂ ಪ್ರಮೋದಾ ಮತ್ತು ರೇವತಿಯನ್ನೇ ನೋಡುತ್ತಿದ್ದರು.
ಇಬ್ಬರ ಮುಖದಲ್ಲೂ ಒಂದು ನಗು, ಅದು ಅಸಹ್ಯ ನಗು…!
ಪ್ರಮೋದಾ ನಿನ್ನೆ ರಾತ್ರಿ ನೀನು ನಮ್ಮ ಮನೆಯ ಹತ್ತಿರ ಬಂದು ಕರೆದಾಗ, ನಾನು ಆತಂಕದಲ್ಲೇ ಹೊರಗೆ ಬಂದೆ. ಆದರೆ ನಿನ್ನ ಅಪ್ಪ ಮಾತಾಡಿದಾಗ ಒಂದು ರೀತಿಯಲ್ಲಿ ಸಮಾಧಾನ ಆಯ್ತು. ಆದರೆ ಇದೆಲ್ಲಾ ಬದುಕಿನಲ್ಲಿ ಸಾಧ್ಯವಾ ಅಂತ ಅಂದುಕೊಂಡೇ ನಾನು ನಾಗೇಂದ್ರನ ಮನೆಗೆ ಹೊರಟೆ.
ನಿನ್ನ ಅಪ್ಪ ಹೇಳಿದಂತೆ ನಾಗೇಂದ್ರನಲ್ಲಿ ಹೇಳಿ, ಅದರ ಬಗ್ಗೆ ಮಾತಾಡಲು ನಿನ್ನ ಅಪ್ಪ ಹೇಳಿದ ಜಾಗಕ್ಕೆ ನಾಗೇಂದ್ರನನ್ನು ಬರಲು ಹೇಳಿದ್ದು.
ನಾಗೇಂದ್ರನ ಮುಖದಲ್ಲಿ ಮೂಡಿದ ಉತ್ಸಾಹದ ನಗುವನ್ನು ಕಂಡು ನನ್ನ ಸಂತೋಷವೇ ಕಣ್ಣಲ್ಲಿ ನೀರಾಗಿ ಇಳಿಯಿತು ಪ್ರಮೋದಾ.
ನಾಗೇಂದ್ರ ನಿನ್ನ ಅಪ್ಪನನ್ನು ಭೇಟಿಯಾಗಲೆಂದು ಚಪ್ಪಲಿಯೊಳಗೆ ತನ್ನ ಪಾದಗಳನ್ನು ತುರುಕಿಸಿದ.
ಆದರೆ ನಿನ್ನ ಅಪ್ಪ ಮಾಡಿದ್ದು… ನೋಡು…!
ಪ್ರಮೋದಾ ನಾಗೇಂದ್ರನ ಮನೆಯ ಕಡೆಯಿಂದ ಹೊರಟ ದಟ್ಟವಾದ ಹೊಗೆ ನಿನ್ನ ಮನೆಯಕಡೆಗೊಮ್ಮೆ ತಿರುಗಿ ಆಕಾಶದ ಕಡೆಗೆ ಹೋಗುತ್ತಿದೆ.
ಪ್ರಮೋದಾ… ನಾಗೇಂದ್ರ ನಿನ್ನೆ ರಾತ್ರಿಯೇ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಅಂತ ಇವತ್ತು ಊರೆಲ್ಲಾ ಸುದ್ದಿ..!
ಆದರೆ ಮೈ ಮೇಲೆ ಸುಮಾರು ಗಾಯ ಇತ್ತಂತೆ… ಅಂತ ಕೊರಗುತ್ತಿದ್ದಾರೆ ಪ್ರಮೋದಾ.
ನಿನಗೆ ನಾಗೇಂದ್ರನ ಮೇಲೆ ಇರುವ ಪ್ರೀತಿಯ ವಿಷಯ, ನಿನ್ನನ್ನು ನೋಡಲು ಬಂದ ಹುಡುಗನಿಗೆ ಗೊತ್ತಾಗಿತ್ತಂತೆ.
ಅದಕ್ಕೆ ಈಗ ಈ ಹೆಂಡತಿ ಸತ್ತ ಎರಡು ಮಕ್ಕಳ ತಂದೆಯನ್ನು ನಿನಗೆ ಕಟ್ಟಿರುವುದು ಪ್ರಮೋದಾ.
ಗಾಳಿಯಲ್ಲಿ ಸೇರಿರ ಬಹುದಾದ ನಾಗೇಂದ್ರನ ಹೊಗೆಯನ್ನು ಉಸಿರಾಡಿದಳು ಪ್ರಮೋದಾ.
ಈಗಷ್ಟೇ ಮದುವೆಯಾದ ತನ್ನ ಗಂಡನ ಎರಡು ಮಕ್ಕಳನ್ನು ತಬ್ಬಿಕೊಂಡಳು.
🌻🌹🌻🌹🌻🌹🌻
No comments:
Post a Comment