Monday, April 4, 2016
•ಹಿರಿದಾಗ ಬೇಕಾದ ಆಕೆ ಇರಿದು ಹೋದಳು•
ನೀರೆ ತಾನು ತನ್ನ ಹರಿಯ ಬಿಟ್ಟು ಹರಿಯ ಬಯಸಿದಳು
ಹರಿ ತಾನು ಕಟ್ಟೆಯ ಕಟ್ಟಿ ತಡೆಯ ಹೊರಟರೆ
ಕಟ್ಟೆಯೊಳಗೆ ನೀರೆ ನಿಲ್ಲುವಳೇ...?
ಹರಿಯ ಬಂಧನದಲ್ಲಿ ಇರುವವರೆಗೂ
ಇಂಗುತ್ತಾ, ಆವಿಯಾಗುತ್ತಾ ಕಟ್ಟೆಯನ್ನು ಸಡಿಲಿಸುತ್ತಾ, ಹರಿಯ ಬಿಟ್ಟು, ಹರಿಯ ಬಯಸುತ್ತಾಳೆ.
ಕರುಣೆಯಿಂದಲೇ ಪೆಟ್ಟ ಕೊಟ್ಟ;
ತನ್ನ ಕಠಿಣ ಕಟ್ಟೆಯನ್ನು ಒಡೆದೇ ಬಿಟ್ಟ
ಹರಿದೋಡಿದಳು,
ಹರಿದು ಹರಿದು ಹರಿಯ ಮನವನು ಹರಿದೋಡಿದಳು
ಇಳಿಯತ್ತಾ ಇಳಿಯುತ್ತಾ ಬಹುದೂರ ಸಾಗಿದಳು
ಹರಿಯ ಬಿಟ್ಟು ಹರಿಯುವ ಹಸಿವನ್ನು ಪೂರ್ತಿ ತೀರಿಸದೆ ಮತ್ತಷ್ಟು ಮತ್ತು ಮತ್ತಷ್ಟು ಹರಿದೋಡಿದಳು
ತನ್ನೊಡಲ ಸಿಹಿಯ ಕಳೆದುಕೊಂಡಳು
ಸೂರ್ಯನನ್ನೇ ತನ್ನೊಳಗೆ ಮುಳುಗಿಸಬಲ್ಲ ಅಬ್ಧಿಯಾದಳು
ಉಪ್ಪಾದ ನೀರೆ ಮುಪ್ಪಾದಳು
ನೆಕ್ಕಿದವರೆಲ್ಲಾ ಕೊಂಡಾಡಿದರು
ಉಪ್ಪಿಗಿಂತ ರುಚಿ ಬೇರುಂಟೆ
ಉಂಟೆ ಈ ಉಪ್ಪು ನೀರಲ್ಲಿ ಎಲೆಯೊಂದು ಚಿಗುರಬಲ್ಲ ಬೇರುಂಟೆ
ಮುಪ್ಪಾಗಿ ಉಪ್ಪಾಗಿ ಕೊರಗಿ ಈಗ ಮತ್ತೆ ತಾನು ಸಿಹಿಯಾಗಬೇಕೆಂದು ಕೊಂಡರೆ...?
ತನ್ನ ಸಾವೇ ಆಗಬೇಕು
ತಳ ಸೇರದೆ ತೇಲಾಡಬೇಕು
ಕಾಯವ ಬಿಟ್ಟು ಮಾಯವೇ ಅಗಬೇಕು
ಸೂರ್ಯಂಗೆ ಮಯ್ಯನೊಡ್ಡಿ
ಆವಿಯಾಗಬೇಕು
ಮೋಡವಾಗಿ ಬೀಸುವ ಗಾಳಿಗೆ ಕಾಯಬೇಕು
ಹೋದ ಜನ್ಮದಲ್ಲಿ ತನ್ನ ಹರಿಯ ಬಂಧನದ ತಡೆಯನ್ನು ಅರಿಯದೆ ಮುರಿದು ಹರಿದು ಹೋದಾಕೆ ಈಗ,
ಮತ್ತೆ ಮಳೆಯಾಗಲು ತನ್ನನ್ನು ತಡೆಯುವ ತಡೆಯನ್ನು ತಾನೇ ಬಯಸಬೇಕು
ಆ ತಡೆಗೂ ಕಾಯಬೇಕು ಕಾಯಬೇಕು
ಕಾದು ಕಾದು ತಡೆಯೊಂದು ಸಿಕ್ಕರೆ
ಮರುಜನ್ಮ ಪಡೆದು ಹನಿಯಾಗಿ ಧರೆಗಿಳಿವ ನೀರೆ ನಿಲ್ಲುವಳೇ
ಹರಿಯ ಬಯಸುತ್ತಾಳೆ.....!
•ಸುಧಾಕರ ಜೈನ್ ಹೊಸಬೆಟ್ಟು ಗುತ್ತು•
〰〰〰〰〰〰〰〰〰〰〰〰
Subscribe to:
Post Comments (Atom)

No comments:
Post a Comment