Monday, April 4, 2016

ನನ್ನ ರಫ್ ಪುಸ್ತಕದೊಂದು ಪುಟ

ಗೋರ್ಕಲ್ಲ ಮೇಲೆ ಮಳೆಗರೆದರೆ ಆ ಕಲ್ಲು ನೀರು ಕುಡಿಯುವುದೇ ಸರ್ವಜ್ಞ…?

        ಮೂರ್ಖಂಗೆ ನೂರು ಕಾಲ ಬುದ್ಧಿಯನ್ನು ಹೇಳುವುದೆಂದರೆ ಅದು ಕಲ್ಲಿನ ಮೇಲೆ ನೀರೆರೆದಂತೆ. ಇದು ಸರ್ವಜ್ಞನ ಮಾತು.
ಸರಿ ಆದರೆ ನನ್ನದೊಂದು ಹುಚ್ಚು ಅಧಿಕ ಪ್ರಸಂಗ ಇದೆ.
ಕಲ್ಲ ಮೇಲೆ ಎಷ್ಟೇ ನೀರೆರೆದರೂ ಅದು ಒಂದು ತೊಟ್ಟನ್ನೂ ತನ್ನೊಳಗೆ ಇಂಗಿಸಿಕೊಳ್ಳದು. ಆದರೆ ನಾನು ನೀರೆರೆಯುವಷ್ಟು ಕಾಲ ಏನಿಲ್ಲಂದರೂ ಒರಟು ಒಣಕಲ್ಲು ಒದ್ದೆಯಾದರೂ ಆಗುತ್ತದಲ್ಲಾ….  ಒರಟು ಒಣಕಲ್ಲಿನ ಬಣ್ಣ ಬದಲಾಗಿ ಒದ್ದೆ ಕಲ್ಲಿನ ಬಣ್ಣವಾದರೂ ಬರುತ್ತದಲ್ಲ. ಮಾತ್ರವಲ್ಲದೆ ಒರಟು ಒಣಕಲ್ಲಿನ ಮೇಲೆ ನಿರಂತರ ನೀರೆರೆದರೆ ನೀರು ಬಿದ್ದ ಭಾಗ ಸವೆದು ಒರಟಿದ್ದದ್ದು ಮುಟ್ಟಲು ಹಿತವಾಗುವಂತಾಗುತ್ತದಲ್ಲ. ನೀರ ಪಸೆಯಿಂದ ಒರಟು ಒಣಕಲ್ಲಿನ ಮೇಲೆ ಪಾಚಿಯೊಂದು ಸುಖ ಸಂಸಾರ ಮಾಡುವಂತಾಗುತ್ತದಲ್ಲ. ನಾನ ನೀರೆರವ ಕಲ್ಲಿನೆಡೆಯಲ್ಲಿ ಎಲ್ಲಾದರೊಂದು ಸೆಲೆಯೊಂದಿದ್ದು ಆ ಸೆಲೆಯಲ್ಲಿ ಬಾಯಿತೆರದಿರುವ ಚಿಪ್ಪೊಂದಿದ್ದರೆ....., ಆಗ ಎಂದಾದರೊಂದು ದಿನ ನನ್ನ ಕೈಯಿಂದ ಜಾರಿ ಬೀಳುವ ನೀರ ಹನಿಯು  ಮುತ್ತಾಗಬಹುದಲ್ಲ.
ಇಷ್ಟಕ್ಕಾದರೂ ಇಷ್ಟದಿಂದಲೇ, ಎಂದೂ ಕುಡಿಯದೆಂದು ಗೊತ್ತಿರುವ ಕಲ್ಲ ಮೇಲೆ ನೀರೆರೆಯುತ್ತೇನೆ.

- ಸುಧಾಕರ ಜೈನ್ ಹೊಸಬೆಟ್ಟು ಗುತ್ತು.
  
Sudhakara Jain Hosabettu Gutthu




No comments:

Post a Comment